ಮಡಿಕೇರಿ, ಜು. 12: ಮಡಿಕೇರಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸ್ಪೀಡ್ ಗವರ್ನರ್ ಅಳವಡಿಸದ ವಾಹನಗಳಿಗೆ ಎಫ್‍ಸಿ ನೀಡುವ ಸಂಬಂಧ ಪ್ರಬಾರ ಆರ್‍ಟಿಓ ಜೆ.ಪಿ. ಗಂಗಾಧರ್ ಅವರ ಬಳಿ ಮಾತುಕತೆ ನಡೆಸಲಾಗಿದೆ. ಕೊಡಗಿನ ವಾಹನ ಚಾಲಕರ ಸಮಸ್ಯೆ ಬಗ್ಗೆ ಮನದಟ್ಟು ಮಾಡಿದ ಹಿನ್ನೆಲೆ ಯಲ್ಲಿ ಮುಂದಿನ ಆದೇಶದವರೆಗೆ ಸ್ಪೀಡ್ ಗವರ್ನರ್ ಅಳವಡಿಸದ ವಾಹನಗಳಿಗೂ ಎಫ್‍ಸಿ ನೀಡಲು ಅಧಿಕಾರಿ ಗಂಗಾಧರ್ ಅವರು ಸಮ್ಮತಿಸಿರುವದಾಗಿ ಕೊಡಗು ಜಿಲ್ಲಾ ಪ್ರವಾಸಿ ವಾಹನ ಚಾಲಕ - ಮಾಲೀಕರ ಸಂಘ ತಿಳಿಸಿದೆ.

ಜಿಲ್ಲಾ ಸಂಘದ ನಿಯೋಗ ಆರ್‍ಟಿಓ ಅವರನ್ನು ಭೇಟಿ ಮಾಡಿ ಅವರೊಂದಿಗೆ ಸಮಾಲೋಚಿಸಿತು. ನಂತರ ರಾಜ್ಯ ಸಂಘದ ಪ್ರಮುಖರಾದ ಷಣ್ಮುಗಪ್ಪ, ರವೀಂದ್ರ ಇವರುಗಳನ್ನು ಸಂಪರ್ಕಿಸಿದ ಸಂದರ್ಭ ಅವರುಗಳು ರಾಜ್ಯಮಟ್ಟದ ಅಧಿಕಾರಿಗಳೊಡನೆ ಮಾತುಕತೆ ನಡೆಸಿದ ಪರಿಣಾಮ ಕೊಡಗಿನಲ್ಲಿ ಎಫ್‍ಸಿ ವಿತರಣೆಗೆ ತಾತ್ಕಾಲಿಕ ಅನುಮತಿ ದೊರೆತಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಕುಳಿಯಕಂಡ ಸಂಪತ್ ತಿಳಿಸಿದ್ದಾರೆ. ನಿಯೋಗದಲ್ಲಿ ಉಪಾಧ್ಯಕ್ಷ ರಫೀಕ್, ಕಾರ್ಯದರ್ಶಿ ರಾಜು, ನಿರ್ದೇಶಕರಾದ ಕುಮಾರ್, ಮಧು, ಆ್ಯಂಟೋನಿ ಇತರರಿದ್ದರು.