ಶ್ರೀಮಂಗಲ, ಜು. 12: ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಬೀರುಗ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ಹುಲಿ ಧಾಳಿ ನಡೆಸಿ ಕೊಂದು ಹಾಕಿರುವ ಘಟನೆ ಇಂದು ಮುಂಜಾನೆ ನಡೆದಿದೆ.

ಬೀರುಗ ಗ್ರಾಮದ ಪಾಚಿಬೇಲು ರೈತ ಮಹಿಳೆ ಮುಕ್ಕಾಟಿರ ಬಿ. ಮುತ್ತಮ್ಮ ಅವರ ಮನೆಯ ಸಮೀಪ ಕೊಟ್ಟಿಗೆಯಲ್ಲಿ ಕಟ್ಟಿದ್ದ ಮಿಶ್ರ ತಳಿಯ ಗಬ್ಬದ ಹಸುವಿನ ಕತ್ತಿನ ಭಾಗದ ಮೇಲೆ ಹುಲಿ ಧಾಳಿ ನಡೆಸಿದ್ದು, ಗಂಭೀರ ಗಾಯಗೊಂಡ ಹಸು ಕೊಟ್ಟಿಗೆಯಲ್ಲಿಯೇ ಸಾವನ್ನಪ್ಪಿದೆ.

ಮನೆಯವರಿಗೆ ಹುಲಿ ಧಾಳಿಯ ಶಬ್ದ ಕೇಳಿದ್ದು, ಬೆಳಗ್ಗೆ ಕೊಟ್ಟಿಗೆಯಲ್ಲಿ ಪರಿಶೀಲಿಸಿದಾಗ ಹಸು ಸತ್ತಿರುವದು ಗೊತ್ತಾಗಿದೆ. ಸ್ಥಳಕ್ಕೆ ಶ್ರೀಮಂಗಲ ಪಶು ವೈದ್ಯಾಧಿಕಾರಿ ಡಾ. ಬಿ.ಜಿ. ಗಿರೀಶ್ ಅವರು ತೆರಳಿ ಮಹಜರು ನಡೆಸಿದ್ದು, ಹುಲಿ ಧಾಳಿಯಿಂದ ಹಸು ಮೃತಪಟ್ಟಿರುವದನ್ನು ಖಚಿತ ಪಡಿಸಿದ್ದಾರೆ. ಹಸುವಿನ ಮೌಲ್ಯ ರೂ. 25 ಸಾವಿರ ಎಂದು ಅಂದಾಜಿಸಿದ್ದಾರೆ.

ಬಡತನದಲ್ಲಿರುವ ತಾನು ಹಸು ಸಾಕಾಣಿಕೆಯಿಂದ ಜೀವನ ಸಾಗಿಸುತ್ತಿದ್ದು, ಸೂಕ್ತ ಪರಿಹಾರ ನೀಡುವಂತೆ ರೈತ ಮಹಿಳೆ ಮುಕ್ಕಾಟಿರ ಬಿ. ಮುತ್ತಮ್ಮ ಅವರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.