ಮಡಿಕೇರಿ, ಜು. 13: ದಕ್ಷಿಣ ಕನ್ನಡದ ಬಿಸಿ ರೋಡ್‍ನ ಶರತ್ ಮಡಿವಾಳರ ಮೇಲೆ ಹಲ್ಲೆಯಾದ ಬಳಿಕ ನಡೆದ ಗಲಭೆ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಬಂದೋಬಸ್ತ್‍ಗೆ ನಿಯೋಜಿಸಲ್ಪಟ್ಟ ಪೊಲೀಸರ ಪಾಡು ಹೇಳ ತೀರದಾಗಿದೆ.ಗಲಾಟೆ ಆರಂಭವಾಗುತ್ತಿದ್ದಂತೆ ರಾತೋರಾತ್ರಿ ಜಿಲ್ಲೆಯಿಂದ 50 ಪೊಲೀಸರನ್ನು ನಿಯೋಜಿಸುವಂತೆ ಸೂಚನೆ ಬಂದ ಹಿನ್ನೆಲೆಯಲ್ಲಿ ವಿವಿಧ ಠಾಣೆಗಳಿಂದ ಒಟ್ಟು 50 ಮಂದಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಸೂಚನೆಯಂತೆ ನಮ್ಮ ಪೊಲೀಸರು ಒಂದು ದಿನದ ಮಟ್ಟಿಗೆ ಬಂದೋಬಸ್ತ್ ಇರಬಹುದೆಂದು ತಿಳಿದು ಒಂದು ಜೊತೆ ಬಟ್ಟೆ, ಒಂದು ಜೊತೆ ಸಮವಸ್ತ್ರದೊಂದಿಗೆ ತೆರಳಿದ್ದಾರೆ. ಆದರೆ ಅನಂತರದಲ್ಲಿ ಪರಿಸ್ಥಿತಿ ಗಂಭೀರ ಸ್ವರೂಪಕ್ಕೆ ತಿರುಗಿತ್ತಲ್ಲದೆ ಶರತ್ ಸಾವನ್ನಪ್ಪಿ ಇನ್ನಷ್ಟು ಬಿಗಡಾಯಿಸಿತು. ಇಲ್ಲಿಂದ ತೆರಳಿರುವ ಪೊಲೀಸರಿಗೆ ಅಲ್ಲಿಯೇ ಇರುವಂತಹ ಪರಿಸ್ಥಿತಿ.., ಇದೀಗ 10 ದಿನಗಳಾದರೂ ಅಲ್ಲಿಂದ ಇವರುಗಳನ್ನು ಕಳುಹಿಸಿಕೊಡುತ್ತಿಲ್ಲ. ಇಲ್ಲಿಂದಲೂ ಕರೆಸಿಕೊಳ್ಳುತ್ತಿಲ್ಲ. ‘ಚಡ್ಡಿ’ ಕೂಡ ಬದಲಾಯಿಸಲಾಗದ ಪರಿಸ್ಥಿತಿಯಲ್ಲಿ ನಮ್ಮ ಪೊಲೀಸರು ಕರ್ತವ್ಯ ನಿರ್ವಹಿಸುವಂತಹ ಪರಿಸ್ಥಿತಿ ನಿರ್ಮಾಣಗೊಂಡಿರುವದಾಗಿ ಅಲ್ಲಿ ಕೆಲಸ ನಿರ್ವಹಿಸುತ್ತಿರುವವರು ಅವಲತ್ತುಕೊಂಡಿದ್ದಾರೆ...!