*ಗೋಣಿಕೊಪ್ಪಲು, ಜು. 13: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ತೇಗದ ಮರ ಕಡಿಯುತ್ತಿದ್ದ ನಾಲ್ವರು ಆರೋಪಿಗಳಲ್ಲಿ ಇಬ್ಬರನ್ನು ಅರಣ್ಯಾಧಿಕಾರಿಗಳು ಗುರುವಾರ ಬಂಧಿಸಿದ್ದಾರೆ. ಮತ್ತಿಬ್ಬರು ತಲೆ ಮರೆಸಿಕೊಂಡಿದ್ದಾರೆ. ನಿಟ್ಟೂರು ಕಾರ್ಮಾಡು ಗ್ರಾಮದ ಶರತ್, ಚಾಮ ಬಂಧಿತರು. ಅಪ್ಪಣ್ಣ, ಚಂದ ತಲೆ ಮರೆಸಿಕೊಂಡವರು.ಆರೋಪಿಗಳು ನಾಗರಹೊಳೆ ವನ್ಯಜೀವಿ ವಿಭಾಗದ ಕಲ್ಲಳ್ಳ ವಲಯ ವ್ಯಾಪ್ತಿಯ ತಟ್ಟೆಕೆರೆ ಅರಣ್ಯದಲ್ಲಿ ತೇಗದ ಮರ ಕಡಿಯುತ್ತಿದ್ದರು ಎನ್ನಲಾಗಿದೆ. ದೊರೆತ ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿದ ಕಲ್ಲಳ್ಳ ವಲಯ ಅರಣ್ಯಾಧಿಕಾರಿ ಶಿವರಾಮ್ ಮತ್ತು ಸಿಬ್ಬಂದಿ ವರ್ಗದವರು ಮಾಲು ಸಮೇತ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಮತ್ತಿಬ್ಬರ ಬಂಧನಕ್ಕೆ ಎಸಿಎಫ್ ಸತ್ಯನಾರಾಯಣ ಅವರ ನೇತೃತ್ವದಲ್ಲಿ ಬಲೆ ಬೀಸಲಾಗಿದೆ ಎಂದು ಅವರು ತಿಳಿಸಿದರು. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಎಂ.ಕೆ. ಸ್ವಾಮಿ, ಅಪ್ಪಸಾಹೇಬ್, ಎಂ.ಸತ್ಯಪಾಲ, ಅರಣ್ಯ ರಕ್ಷಕರಾದ ಶ್ರೀಕಾಂತ್, ಕುಮಾರ್ ಕಟ್ಟೆಹೊಲದ, ರವಿಕುಮಾರ್, ಮಹದೇವ, ನಿರಲ್ ಕುಮಾರ್ ಪಾಲ್ಗೊಂಡಿದ್ದರು.