ಕೂಡಿಗೆ, ಜು. 14: ಪಶು ವೈದ್ಯಕೀಯ ಪದವೀಧರರಿಗೆ ವನ್ಯಜೀವಿ ವಿಷಯದಲ್ಲಿ ತರಬೇತಿ ಮತ್ತು ಸಂಶೋಧನೆ ನಡೆಸಲು 2010ರಲ್ಲಿ ಪ್ರಾರಂಭಗೊಳಿಸಿದ್ದು, ಈ ಸಂಸ್ಥೆಯನ್ನು ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ವತಿಯಿಂದ ಪ್ರಾರಂಭಿಸಲಾಗಿದೆ.

ಈ ಸಂಸ್ಥೆಯು ಮೊದಲಿಗೆ 2007ರಲ್ಲಿ ಕೂಡಿಗೆಯ ಜರ್ಸಿ ತಳಿ ಸಂವರ್ದನ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ನಂತರ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಅಳುವಾರ ಗ್ರಾಮದಲ್ಲಿ 2010 ರಿಂದ ನೂತನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಈ ಕೇಂದ್ರದಲ್ಲಿ ಸಂಶೋಧನೆ, ಪಶು ವೈದ್ಯಕೀಯ ಪದವೀಧರರಿಗೆ ವನ್ಯಜೀವಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ (ಎಂವಿಎಸ್‍ಸಿ ಮತ್ತು ಪಿಎಚ್‍ಡಿ), ವನ್ಯಜೀವಿ ತರಬೇತಿಯಲ್ಲಿ ಸಾರ್ವಜನಿಕ ಶಿಕ್ಷಣ ನೀಡುವದು ಈ ಕೇಂದ್ರದ ಉದ್ದೇಶವಾಗಿದೆ.

ಈ ಕೇಂದ್ರದಿಂದ ಈಗಾಗಲೇ 8 ಪದವೀಧರರ ತಂಡಗಳು ತರಬೇತಿ ಪಡೆದು ಕಾರ್ಯಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಸಂಶೋಧನ ಸಂಸ್ಥೆಯಲ್ಲಿ ಆನೆಗಳಿಗೆ ಮದ್ದು ಅಳವಡಿಕೆ, ಪ್ರಾಣಿಗಳ ಹಾವಳಿಯನ್ನು ತಪ್ಪಿಸಲು ಅವುಗಳಿಗೆ ಬೇಕಾಗುವ ಮುಂಜಾಗೃತ ಕ್ರಮಗಳು ಹಾಗೂ ವನ್ಯಪ್ರಾಣಿಗಳ ಇರುವಿಕೆಯ ಬಗ್ಗೆ ತಿಳಿದು, ಅವುಗಳಿಗೆ ಗನ್‍ಗಳ ಮೂಲಕ ನಿದ್ರಾವಸ್ಥೆ ಔಷಧಿಯುಳ್ಳ ಇಂಜೆಕ್ಷನ್ ನೀಡುವ ತರಬೇತಿ ಹೊಂದಿದ್ದಾರೆ.

ನಂತರ ಪ್ರಾಣಿಗಳನ್ನು ಅರಣ್ಯಕ್ಕೆ ಅಥವ ಬೇರೆಡೆಗೆ ಸಾಗಿಸುವ ಪ್ರಾಯೋಗಿಕ ತರಬೇತಿ, ಜೊತೆಗೆ ಸಾಂಕ್ರಾಮಿಕ ರೋಗಕ್ಕೆ ಔಷಧಿಗಳನ್ನು ನೀಡುವಿಕೆ, ನಿರ್ವಹಣೆ, ಆಹಾರ ನೀಡುವಿಕೆ, ಪ್ರಾಣಿಗಳ ವಸತಿಗಳ ಬಗ್ಗೆ ಈ ಕೇಂದ್ರದಲ್ಲಿ ಪ್ರಾಯೋಗಿಕವಾಗಿ ತರಬೇತಿ ಪಡೆಯುತ್ತಿದ್ದಾರೆ.

ರಾಜ್ಯದ ಮೂಲೆ ಮೂಲೆಗಳಿಂದ ಪಶು ವೈದ್ಯರು ಈ ಸಂಶೋಧನಾ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರುಗಳಿಗೆ ತಜ್ಞ ಪಶು ವೈದ್ಯರು ತರಬೇತಿ ನೀಡುತ್ತಿದ್ದಾರೆ.

ಈಗಾಗಲೇ ಒಂದು ತಂಡದಲ್ಲಿ 25 ಜನರಂತೆ ಎಂಟು ತಂಡಗಳು ತರಬೇತಿ ಪಡೆದು ರಾಜ್ಯ ವಿವಿಧ ಅರಣ್ಯ ಪ್ರದೇಶಗಳಲ್ಲಿ ಹಾಗೂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿ ತರಬೇತಿ ಪಡೆದ ಪಶು ವೈದ್ಯರು ಜಿಲ್ಲೆಯಲ್ಲಿ ಆನೆ ಹಾವಳಿ ಸಂದರ್ಭ ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯೊಂದಿಗೆ ಸಹಕಾರ ನೀಡುತ್ತಿದ್ದಾರೆ.

ರಾಜ್ಯ ಸರ್ಕಾರ ಈ ಕೇಂದ್ರಕ್ಕೆ 89 ಎಕರೆ ಜಾಗವನ್ನು ಮಂಜೂರು ಮಾಡಿ ಉತ್ತಮವಾದ ಕಟ್ಟಡವನ್ನು ನಿರ್ಮಿಸಿಕೊಟ್ಟಿದೆ ಹಾಗೂ ವಸತಿ ನಿಲಯದ ವ್ಯವಸ್ಥೆಯು ಇದೆ.

ದೊಡ್ಡಅಳುವಾರದ ಸಂಸ್ಥೆಯಲ್ಲಿ ಪಠ್ಯಗಳನ್ನು ಬೋಧಿಸುವದಕ್ಕೂ ಪ್ರಯೋಗಾಲಯದ ಸೌಕರ್ಯವಿದೆ. ಇದಕ್ಕೆ ಪೂರಕವಾಗಿ ಕರ್ನಾಟಕ ಸರ್ಕಾರ ಅರಣ್ಯ ಇಲಾಖೆಗೆ ಒಳಪಟ್ಟ ಅರಣ್ಯ ಮತ್ತು ಕರ್ನಾಟಕ ಮೃಗಾಲಯ ಪ್ರಾಧಿಕಾರದಿಂದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬನ್ನೇರುಘಟ್ಟ, ನಾಗರಹೊಳೆ, ಬಂಡೀಪುರ, ಉದ್ಯಾನವನ ಮತ್ತು ಮೈಸೂರು ಮೃಗಾಲಯಗಳಿಗೆ ವಿದ್ಯಾರ್ಥಿಗಳನ್ನು ಸಂಶೋಧನೆಗಾಗಿ ಕರೆದೊಯ್ದು ಪ್ರಾಯೋಗಿಕವಾಗಿ ತರಬೇತಿ ನೀಡಲಾಗುತ್ತಿದೆ.

ಈ ಕೇಂದ್ರದಲ್ಲಿ ಪಶು ವೈದ್ಯಕೀಯ ಸಂಬಂಧಿಸಿದಂತೆ ವನ್ಯಜೀವಿ ವಿಷಯದಲ್ಲಿ ವಿಶೇಷ ಪುಸ್ತಕಗಳ ವ್ಯವಸ್ಥೆಯು ಇದೆ.

ಮುಂದಿನ ದಿನಗಳಲ್ಲಿ ಸಂಶೋಧನಾ ಕೇಂದ್ರದಲ್ಲಿ ರೈತರಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಹಂದಿ ಸಾಕಾಣಿಕೆಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಹಂದಿ ಸಾಕಾಣಿಕಾ ತರಬೇತಿ ಕೇಂದ್ರ ಸ್ಥಾಪಿಸಲು ಚಿಂತನೆ ಮಾಡಲಾಗಿದ್ದು, ಈ ಬಗ್ಗೆ ಪತ್ರಗಳನ್ನು ಕ್ಷೇತ್ರದ ಶಾಸಕರಿಗೆ ಹಾಗೂ ಸರ್ಕಾರದ ಗಮನಕ್ಕೂ ತರಲಾಗಿದೆ. ಕೇಂದ್ರದಲ್ಲಿ ಸಿಬ್ಬಂದಿಗಳ ಕೊರತೆಯಿದ್ದು, ನೇಮಕಾತಿ ಆಗಬೇಕಿದೆ. ಇದಕ್ಕೆ ಸಂಬಂಧಪಟ್ಟ ರಾಜ್ಯ ಸರ್ಕಾರ ಮತ್ತು ಕ್ಷೇತ್ರದ ಶಾಸಕರು ಪ್ರಯತ್ನ ಪಡಬೇಕಾಗಿದೆ ಎಂದು ಕೇಂದ್ರದ ನಿರ್ದೇಶಕ ಪ್ರೊ. ಎ. ಮುರುಳೀಧರ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಈ ಎಲ್ಲಾ ವ್ಯವಸ್ಥೆಗಳನ್ನು ನೀಡಿದರೂ ಕೇಂದ್ರಕ್ಕೆ ತೆರಳಲು ಸಮರ್ಪಕವಾದ ರಸ್ತೆಯ ಕೊರತೆ ಇದೆ. ಜೊತೆಯಲ್ಲಿ ಈಗಿರುವ ಕೇಂದ್ರದ ವೀಸ್ತೀರ್ಣ ದೊಳಗೆ ಸುಸಜ್ಜಿತ ಕಟ್ಟಡ ನಿರ್ಮಿಸಲು ಅನುದಾನವು ಬಿಡುಗಡೆ ಗೊಂಡಲ್ಲಿ ಇನ್ನೂ ಉತ್ತಮ ತರಬೇತಿ ನೀಡಲು ಸಹಕಾರ ನೀಡಿದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ