ಮಡಿಕೇರಿ, ಜು. 14: ಕೊಡಗು ಜಿಲ್ಲಾ ಕಾಂಗ್ರೆಸ್‍ನ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಮುಕ್ಕಾಟಿರ ಶಿವು ಮಾದಪ್ಪ ಅವರು ಇಂದು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಈ ತನಕ ಪ್ರಬಾರ ಅಧ್ಯಕ್ಷರಾಗಿದ್ದ ಟಿ.ಪಿ. ರಮೇಶ್ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಶಿವು ಮಾದಪ್ಪ ಪ್ರಸ್ತುತ ಬಿಜೆಪಿಯ ಭದ್ರಕೋಟೆ ಯಂತಾಗಿರುವ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟನಾತ್ಮಕವಾಗಿ ಬೆಳೆಸಿ ಮತ್ತೆ ಕಾಂಗ್ರೆಸ್‍ನ ತೆಕ್ಕೆಗೆ ಎಳೆದುಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನ ನಡೆಸಲಾಗುವದು. ಪಕ್ಷದ ಹಿರಿಯರು, ಮುಖಂಡರ ಸಲಹೆ - ಸೂಚನೆ ಪಡೆದುಕೊಳ್ಳಲಾಗುವದು. ಇದರೊಂದಿಗೆ ಯುವ ಜನಾಂಗವನ್ನೂ ಸಂಘಟಿಸಿ ಮುಂದಿನ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಗೆಲುವಿಗೆ ಯತ್ನಿಸಲಾಗುವದು. ಪಕ್ಷ ಉನ್ನತ ಜವಾಬ್ದಾರಿ ನೀಡಿದೆ, ಹಿರಿಯರು ಸೂಕ್ತ ಸಲಹೆ ಮಾರ್ಗ ದರ್ಶನ ನೀಡಿದರೆ, ರಾಜಕೀಯ ಯುದ್ಧಕ್ಕೆ ಯುವಕರು ಮುಂದಾಗಲಿದ್ದಾರೆ ಎಂದರು.