ಮಡಿಕೇರಿ, ಜು. 14 : ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿರುವ ಭ್ರಷ್ಟ ವ್ಯವಸ್ಥೆಯನ್ನು ನಿಯಂತ್ರಿಸಲು ಮತ್ತು ಶಿಕ್ಷಣ, ಆರೋಗ್ಯ, ಕಾನೂನು ವ್ಯವಸ್ಥೆಯಡಿ ಕೊಡವ ಸಮುದಾಯಕ್ಕೆ ಸಹಕಾರ ನೀಡಲು ಮಡಿಕೇರಿ ಕೊಡವ ಸಮಾಜ ಸಹಾಯವಾಣಿಯೊಂದನ್ನು ಆರಂಭಿಸಲು ನಿರ್ಧರಿಸಿದೆ. ತಾ. 17 ರಂದು ನಗರದ ಕೊಡವ ಸಮಾಜದ ವಾಣಿಜ್ಯ ಸಂಕೀರ್ಣದಲ್ಲಿ ಸಹಾಯ ವಾಣಿ ಕಚೇರಿ ಕಾರ್ಯಾರಂಭ ಗೊಳ್ಳÀಲಿದೆ.

ಸುದ್ದಿಗೋಷ್ಠಿಯಲ್ಲಿ ಕೊಡವ ಸಮಾಜದ ಜಂಟಿ ಕಾರ್ಯದರ್ಶಿ ಹಾಗೂ ಖಜಾಂಚಿ ಮಾದೇಟಿರ ಬೆಳ್ಯಪ್ಪ ತಿಳಿಸಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಎಲ್ಲೆ ಮೀರಿದ್ದು, ಹಣವಿಲ್ಲದೆ ಅರ್ಜಿಗಳು ವಿಲೆÉೀವಾರಿಯಾಗುತ್ತಿಲ್ಲವೆಂದು ಆರೋಪಿಸಿದರು. ಪ್ರತಿಯೊಂದು ಟೇಬಲ್ ಲಂಚವನ್ನು ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಎಕರೆಗೆ ಇಂತಿಷ್ಟು ಲಂಚವೆಂದು ನಿಗದಿ ಮಾಡಲಾಗಿದೆ. ಕಂದಾಯ ಹಾಗೂ ನೋಂದಣಿ ಇಲಾಖೆಯಲ್ಲಿ ಅರ್ಜಿದಾರರಿಗೆ ಹೆಚ್ಚಿನ ಅಡಚಣೆÉಯಾಗುತ್ತಿದ್ದು, ಭೂಮಿ ವಿಚಾರಕ್ಕೆ ಸಂಬಂಧಿಸಿದ ಕಡತಗಳು ವಿಲೆÉೀವಾರಿಯಾಗುತ್ತಿಲ್ಲ. ಈ ಬೆಳವಣಿಗೆಯಿಂದ ಸಕಾಲದಲ್ಲಿ ಕೆಲಸ, ಕಾರ್ಯಗಳು ನಡೆಯದೆ ಸಂಕಷ್ಟಕ್ಕೆ ಸಿಲುಕಿರುವ ಕೊಡವ ಸಮುದಾಯದ ಅರ್ಜಿದಾರರಿಗೆ ಸಹಾಯ ಮಾಡಲು ಸಹಾಯವಾಣಿಯನ್ನು ಆರಂಭಿಸುತ್ತಿರುವದಾಗಿ ತಿಳಿಸಿದರು.

ಕೆಳ ಹಂತದಿಂದಲೆ ಭ್ರಷ್ಟಾಚಾರ ವನ್ನು ತೊಡೆದು ಹಾಕುವದಕ್ಕಾಗಿ ಸಹಾಯವಾಣಿ ಎನ್ನುವ ಮೊದಲ ಹೆಜ್ಜೆಯನ್ನು ಕೊಡವ ಸಮಾಜ ಇಡುತ್ತಿದೆ. ಸಹಾಯವಾಣಿ ಕಚೇರಿಯಲ್ಲಿ ಸಮುದಾಯದ ನಿವೃತ್ತ ಸರ್ಕಾರಿ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದು, ಅರ್ಜಿ ವಿಲೇವಾರಿಗೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ಅಗತ್ಯ ಸಹಕಾರವನ್ನು ನೀಡಲಿದ್ದಾರೆÉ ಎಂದರು.ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದ ಮಾಹಿತಿಯ ಕೊರÀತೆಯನ್ನು ಎದುರಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡುವ ಕಾರ್ಯವನ್ನು ಕೂಡ ಮಾಡಲಾಗುವದು. ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೂ ಸ್ಪಂದಿಸಲಾಗುವದು. ಕಾನೂನಿನ ಸಹಕಾರವನ್ನು ಕೂಡ ನೀಡಲಾಗುವದೆಂದು ತಿಳಿಸಿದ ಬೆಳ್ಯಪ್ಪ, ಅಧಿಕಾರಿಗಳು ಜಿಲ್ಲೆಯ ಅರ್ಜಿದಾರರೊಂದಿಗೆ ಸೌಜನ್ಯದಿಂದ ವರ್ತಿಸಿ, ಶೋಷಣೆ ಮುಕ್ತ ಸೇವೆಯನ್ನು ನೀಡಬೇಕೆಂದು ಕೊಡವ ಸಮಾಜ ಎಚ್ಚರಿಸುವದಾಗಿ ತಿಳಿಸಿದರು.

ತಾ. 16 ರಂದು ನಡೆಯುವ ಕೊಡವ ಸಮಾಜದ ಮಹಾಸಭೆಯಲ್ಲಿ ಸಹಾಯವಾಣಿ ಕುರಿತು ಚರ್ಚಿಸಲಾಗುವದೆಂದ ಅವರು ಜಿಲ್ಲೆಯಲ್ಲಿ ಕೆಳ ಹಂತದಿಂದ ಮೇಲ್ಮಟ್ಟದ ಅಧಿಕಾರಿಗಳವರೆಗೂ ಭ್ರಷ್ಟಾಚಾರದ ದಂಧೆ ನಡೆಯುತ್ತಿದ್ದು, ತಾಲ್ಲೂಕು ಕಚೇರಿಗಳಲ್ಲಿ ಮಧ್ಯವರ್ತಿಗಳಿಂದಲೆ ಅರ್ಜಿ ವಿಲೇವಾರಿಯಾಗುತ್ತಿದೆ. ಕಂದಾಯ ಇಲಾಖೆಯ ನಿವೃತ್ತ ನೌಕರರೆ ಮಧ್ಯವರ್ತಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿಯೊಂದು ಕಡತಗಳ ವಿಲೇವಾರಿಗೂ ಲಂಚದ ಮೊತ್ತವನ್ನು ನಿಗದಿಪಡಿಸಿರುವುದು ಖಂಡನೀಯವೆಂದರು.

ಸಹಾಯವಾಣಿ ಸಂಖ್ಯೆ 08272-225776 ಆಗಿದ್ದು, ಸುದ್ದಿಗೋಷ್ಠಿಯಲ್ಲಿ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ, ಮಾಧ್ಯಮ ವಕ್ತಾರರಾದ ಪೊನ್ನಚೆಟ್ಟಿರ ಸುಬ್ಬಯ್ಯ, ಕೊಕ್ಕಲೇರ ಕಾರ್ಯಪ್ಪ, ಕಾರ್ಯದರ್ಶಿ ಅರೆಯಡ ರಮೇಶ್ ಹಾಗೂ ಉಪಾಧ್ಯಕ್ಷ ಮಣವಟ್ಟೀರ ಚಿಣ್ಣಪ್ಪ ಹಾಜರಿದ್ದರು.