ಸಿದ್ದಾಪುರ, ಜು. 14: ಸಿದ್ದಾಪುರದಿಂದ ಮಂಗಳೂರಿಗೆ ನೂತನ ಬಸ್ ಮಾರ್ಗವನ್ನು ರಾಜ್ಯ ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷ ಟಿ.ಪಿ ರಮೇಶ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೂತನ ಬಸ್ಸ್ ಮಾರ್ಗಗಳನ್ನು ರಾಜ್ಯ ಸರಕಾರ ಒದಗಿಸುತ್ತಿದೆ. ಈ ಭಾಗದ ಜನರ ಹಲವು ದಿನಗಳ ಬೇಡಿಕೆಯಾದ ಮಂಗಳೂರು ಮಾರ್ಗ ಬಸ್ ಸಂಚಾರ ಆರಂಭವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದರು. ಈಗಾಗಲೇ ಸಿದ್ದಾಪುರದಿಂದ ರಾತ್ರಿ ವೇಳೆ ಬೆಂಗಳೂರಿಗೆ ತೆರಳುವ ಬಸ್ಸ್‍ಗೆ ಬೇಡಿಕೆಯಿಡಲಾಗಿದ್ದು, ಸದ್ಯದಲ್ಲೇ ಬಸ್ ಸಂಚಾರ ಆರಂಭಿಸುವ ವಿಶ್ವಾಸವಿದೆ ಎಂದರು. ಸಾರ್ವಜನಿಕರ ಹಿತದೃಷ್ಟಿಯಿಂದ ನೂತನ ಬಸ್ಸ್ ಸಂಚಾರವನ್ನು ಆರಂಭಿಸಿದ್ದು, ಪ್ರಯಾಣಿಕರು ಬಸ್‍ನಲ್ಲಿ ಪ್ರಯಾಣಿಸಿ ಕೆ.ಎಸ್.ಆರ್.ಟಿ.ಸಿ ಗೆ ನಷ್ಟ ಆಗದಂತೆ ಸಹಕರಿಸಬೇಕೆಂದು ಮನವಿ ಮಾಡಿದರು.

ಕೆ.ಎಸ್.ಆರ್.ಟಿ.ಸಿ ನಿಗಮದ ನಿರ್ದೇಶಕ ಶೌಕತ್ ಆಲಿ ಮಾತನಾಡಿ, ಸಿದ್ದಾಪುರದಿಂದ ಮಂಗಳೂರಿಗೆ ತೆರಳುವ ಬಸ್ ಮಾರ್ಗ ಹಲವು ದಿನಗಳ ಬೇಡಿಕೆಯಾಗಿದ್ದು, ಇದೀಗ ಅನುಮತಿ ದೊರಕಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭ ಜಿ.ಪಂ ಸದಸ್ಯೆ ಸುನಿತಾ ಮಂಜುನಾಥ್, ತಾ.ಪಂ ಸದಸ್ಯೆ ಸುಹದಾ ಅಶ್ರಫ್, ಗ್ರಾ.ಪಂ ಅಧ್ಯಕ್ಷ ಮಣಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ ಸಲಾಂ, ಮಾಜಿ ಜಿ.ಪಂ ಸದಸ್ಯ ಎಂ.ಎಸ್ ವೆಂಕಟೇಶ್, ಕಾರ್ಮಿಕ ಮುಖಂಡ ಪಿ.ಆರ್ ಭರತ್, ವಲಯ ಕಾಂಗ್ರೆಸ್ ಅಧ್ಯಕ್ಷ ಬಷೀರ್, ಸಮಾಜಸೇವಕ ಜೋಸೆಫ್ ಶ್ಯಾಂ, ಎ.ಕೆ ಹಕೀಂ, ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ಗ್ರಾ.ಪಂ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.