ಕೂಡಿಗೆ, ಜು. 15: ಕೂಡಿಗೆ ಸರ್ಕಾರಿ ಕ್ರೀಡಾ ಪ್ರೌಢಶಾಲೆಗೆ ಕರ್ನಾಟಕ ರಾಜ್ಯ ಕ್ರೀಡಾ ಸಚಿವ ಪ್ರಮೋದ್ ಮಧÀ್ವರಾಜ್ ದಿಢೀರ್ ಭೇಟಿ ನೀಡಿ ಕ್ರೀಡಾಶಾಲೆಯ ಹಾಕಿ ಟರ್ಫ್ ಮೈದಾನದ ಕಾಮಗಾರಿ ಅಪೂರ್ಣಗೊಂಡಿರುವದನ್ನು ವೀಕ್ಷಿಸಿ, ಮಾಹಿತಿಯನ್ನು ಪಡೆದರು.

ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ತೆರಳಿ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದರು. ನಂತರ ಭೋಜನ ಕೊಠಡಿ ಹಾಗೂ ಅಡುಗೆ ಕೊಠಡಿ ತೆರಳಿ, ಶುಚಿತ್ವ ಕಾಪಾಡಿಕೊಳ್ಳುವ ಬಗ್ಗೆ ಮೇಲ್ವಿಚಾರಕರಿಗೆ ಸೂಚನೆ ನೀಡಿದರು. ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯ ಸರ್ಕಾರದಿಂದ ಕ್ರೀಡಾ ಇಲಾಖೆಯ ಮೂಲಕ ಕೊಡಗಿನಲ್ಲಿ ನಡೆಯುತ್ತಿರುವ ಹಾಕಿ ಟರ್ಫ್ ಕಾಮಗಾರಿಗೆ ಹಣ ಬಿಡುಗಡೆ ಮಾಡಲು ಪ್ರಯತ್ನಿಸ ಲಾಗುವದು ಎಂದರು. ಈ ಸಂದರ್ಭ ಕೂಡುಮಂಗಳೂರು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶಶಿಕಿರಣ್ ಹಾಗೂ ಸ್ಥಳೀಯರು ಆದಷ್ಟುಬೇಗ ಹಾಕಿ ಟರ್ಫ್ ಮೈದಾನ ಕಾಮಗಾರಿಗೆ ಹಣ ಬಿಡುಗಡೆಗೊಳಿಸಿ ಉತ್ತಮ ಗುಣಮಟ್ಟದ ಕಾಮಗಾರಿ ನಡೆಯುವಂತೆ ಕ್ರಮ ವಹಿಸಲು ಸಚಿವರಲ್ಲಿ ಮನವಿ ಮಾಡಿದರು.

ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯಿನಿ ಕುಂತಿ ಬೋಪಯ್ಯ, ಶಿಕ್ಷಕ ವೃಂದ ಹಾಗೂ ಆಡಳಿತ ವರ್ಗದವರು ಇದ್ದರು.