ವೀರಾಜಪೇಟೆ, ಜು. 16: ಮರದ ಕೊಂಬೆ ಕಡಿಯಲು ಹೋಗಿದ್ದ ವ್ಯೆಕ್ತಿ ಮರದಿಂದ ಕಾಲುಜಾರಿ ಬಿದ್ದು ಮೃತ ಪಟ್ಟಿರುವ ಘಟನೆ ವೀರಾಜಪೇಟೆ ಬಳಿಯ ಆರ್ಜಿ ಗ್ರಾಮದ ಪೆರುಂಬಾಡಿಯಲ್ಲಿ ನಡೆದಿದೆ.

ಸಮೀಪದ ಪೆರುಂಬಾಡಿಯ ನಿವಾಸಿ ಕಾರ್ಮಿಕ ಪಿ.ಐ.ದಿನೇಶ್ (35) ಎಂಬವರು ಕೂಲಿಗಾಗಿ ಅದೇ ಗ್ರಾಮದ ರಮೇಶ್ ಎಂಬವರಿಗೆ ಸೇರಿದ ಮರದ ಕೊಂಬೆ ಕಡಿಯಲು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮರಕ್ಕೆ ಹತ್ತಿದ್ದು ಈ ಸಂದರ್ಭ ಅಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಕೂಡಲೆ ಜೊತೆಯಲ್ಲಿದ್ದ ಸ್ಥಳೀಯರು ದಿನೇಶ್‍ನನ್ನು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲು ಮುಂದಾದರಾದರೂ ದಾರಿ ಮಧ್ಯದಲ್ಲೆ ಮೃತಪಟ್ಟಿದ್ದಾರೆ.

ಮೃತನ ಅಣ್ಣ ಸುರೇಶ್ ವೀರಾಜಪೇಟೆ ನಗರ ಠಾಣೆಗೆ ದೂರು ನೀಡಿದ ಹಿನ್ನಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ದಿನೇಶ್ ಇಬ್ಬರು ಮಕ್ಕಳು, ಪತ್ನಿಯನ್ನು ಅಗಲಿದ್ದಾರೆ.