ಶ್ರೀಮಂಗಲ, ಜು. 17: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೊಡವ ಜನಾಂಗದ ಹಬ್ಬ-ಹರಿದಿನ, ಸಾಂಸ್ಕøತಿಕ ಚಟುವಟಿಕೆ ಮತ್ತು ಜನಾಂಗದ ಹಿತಸಂರಕ್ಷಣೆಗಾಗಿ ಕಳೆದ 15 ವರ್ಷದ ಹಿಂದೆ ಸ್ಥಾಪನೆಯಾದ ಮರೆನಾಡು ಕೊಡವ ಸಮಾಜ ಸಂಸ್ಥೆಗೆ ಸ್ವಂತ ಕಟ್ಟಡ ನಿರ್ಮಿಸಲು ಇದೀಗ ಎರಡು ಏಕ್ರೆ ಜಾಗವನ್ನು ಅಭಿಮಾನದಿಂದ ರಿಯಾಯಿತಿ ದರದಲ್ಲಿ ಕಾಯಪಂಡ ಕೆ. ಪೆಮ್ಮಯ್ಯ ಅವರು ನೀಡಿದ್ದು, ಈ ಜಾಗವನ್ನು ಸೂಕ್ತ ರೀತಿಯಲ್ಲಿ ಜನಾಂಗದ ಹಿತಾಸಕ್ತಿಗೆ ಪೂರಕವಾಗಿ ಬಳಸಿಕೊಳ್ಳಲಾಗುವದೆಂದು ಮರೆನಾಡು ಕೊಡವ ಸಮಾಜದ ಅಧ್ಯಕ್ಷ ಮಲ್ಲೆಂಗಡ ಪೆಮ್ಮಯ್ಯ ಅವರು ಅಭಿಪ್ರಾಯಪಟ್ಟರು.

ಬಿರುನಾಣಿ ಮಹಿಳಾ ಸಮಾಜ ಸಭಾಂಗಣದಲ್ಲಿ ಕೊಡವ ಸಮಾಜದ ವತಿಯಿಂದ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜದ ಉಪಾಧ್ಯಕ್ಷ ಬೊಳ್ಳೇರ ಅಪ್ಪುಟ ಪೊನ್ನಪ್ಪ ಮಾತನಾಡಿ, ಕಳೆದ 15 ವರ್ಷದಿಂದ ಮರೆನಾಡು ಕೊಡವ ಸಮಾಜದ ಕಾರ್ಯಚಟುವಟಿಕೆಗೆ ಸೂಕ್ತ ಜಾಗಕ್ಕಾಗಿ ಪ್ರಯತ್ನಿಸಿದರೂ ಜಾಗ ಲಭ್ಯವಾಗಲಿಲ್ಲ. ಇದೀಗ ಮನಪೂರ್ವಕವಾಗಿ ಕೊಡವ ಸಮುದಾಯದ ಮೇಲೆ ವಿಶೇಷ ಅಭಿಮಾನವಿಟ್ಟು ಕಾಯಪಂಡ ಕೆ. ಪೆಮ್ಮಯ್ಯ ಅವರು ತಮ್ಮ ಎರಡು ಏಕ್ರೆ ಜಾಗವನ್ನು ನೀಡಿದ್ದು, ಈ ಜಾಗದಲ್ಲಿ ಸೂಕ್ತ ರೀತಿಯಲ್ಲಿ ಕ್ರಿಯಾ ಯೋಜನೆ ಮಾಡಿ ಸದುಪಯೋಗ ಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವದು. ಇದಕ್ಕಾಗಿ ಅಗತ್ಯ ಹಣಕಾಸಿನ ನೆರವು ನಿರೀಕ್ಷಿಸಲಾಗಿದೆ ಎಂದು ಹೇಳಿದರು.

ಕೊಡವ ಸಮಾಜದ ಸಲಹೆಗಾರ ಕಾಳಿಮಾಡ ಮುತ್ತಣ್ಣ ಮಾತನಾಡಿ, ಮರೆನಾಡು ಕೊಡವ ಸಮಾಜದ ಮುಂದಿನ ಕಾರ್ಯಚಟುವಟಿಕೆಯಲ್ಲಿ ಜನಾಂಗದ ಯುವಪೀಳಿಗೆ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು. ಸನ್ಮಾನಿತ ಜಾನಪದ ತಜ್ಞರು ಯುವಪೀಳಿಗೆಗೆ ಜಾನಪದ ಕಲೆಯ ವಿಶೇಷತೆಯ ಅರಿವು ಹಾಗೂ ಕಲಿಕೆಗೆ ಆಸಕ್ತಿ ವಹಿಸಬೇಕು. ತಮ್ಮಲ್ಲಿರುವ ಜಾನಪದ ಕಲೆಯನ್ನು ಯುವಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ಇದೆ ಎಂದು ಹೇಳಿದರು.

ಈ ಸಂದÀರ್ಭ ಮರೆನಾಡು ಕೊಡವ ಸಮಾಜದ ಅಧ್ಯಕ್ಷರಾಗಿ ಕಳೆದ ಹಲವು ವರ್ಷದಿಂದ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಕರ್ತಮಾಡ ಗಪ್ಪು ಗಣಪತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆÀಮಿಯಿಂದ ಗೌರವ ಪ್ರಶಸ್ತಿ ಪಡೆದ ಮರೆನಾಡು ಕೊಡವ ಸಮಾಜದ ನಿರ್ದೇಶಕ ಹಾಗೂ ಜಾನಪದ ತಜ್ಞ ಬಲ್ಯಮೀದೇರಿರ ಸಿ. ನಾಣಯ್ಯ ಅವರನ್ನು ಸನ್ಮಾಸಲಾಯಿತು. ಮರೆನಾಡು ಕೊಡವ ಸಮಾಜಕ್ಕೆ 2 ಏಕ್ರೆ ಜಾಗ ನೀಡಿದ ಕಾಯಪಂಡ ಕೆ. ಪೆಮ್ಮಯ್ಯ, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಣ್ಣೀರ ಹರೀಶ್ ಮಾದಪ್ಪ ಅವರನ್ನು ಗೌರವಿಸಲಾಯಿತು.

ಸಮಾಜದ ನಿರ್ದೇಶಕಿ ಕುಪ್ಪಣಮಾಡ ಬೇಬಿ ಪ್ರಾರ್ಥಿಸಿ, ಅಧ್ಯಕ್ಷ ಮಲ್ಲೇಂಗಡ ಪೆಮ್ಮಯ್ಯ ಸ್ವಾಗತಿಸಿ, ಉಪಾಧ್ಯಕ್ಷ ಬೊಳ್ಳೇರ ಅಪ್ಪುಟ ಪೊನ್ನಪ್ಪ ವಂದಿಸಿದರು.

ವೇದಿಕೆಯಲ್ಲಿ ಸಮಾಜದ ಗೌ.ಕಾರ್ಯದರ್ಶಿ ಮಲ್ಲೇಂಗಡ ಧನಂಜಯ, ಖಜಾಂಚಿ ಕಾಯಪಂಡ ಸುನಿಲ್ ಹಾಜರಿದ್ದರು.