ಮೂರ್ನಾಡು, ಜು. 16: ರೋಟರಿ ಮಿಸ್ಟಿ ಹಿಲ್ಸ್ ಮತ್ತು ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜು ವತಿಯಿಂದ ವಿದ್ಯಾರ್ಥಿನಿಯರಿಗೆ ಆರೋಗ್ಯ ಸಂಬಂಧಿತ ಮಾಹಿತಿ ನೀಡಲಾಯಿತು.

ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಡಾ. ಶುಭಾ ರಾಜೇಶ್ ಕಾಲೇಜಿನ ವಿದ್ಯಾರ್ಥಿನಿಯರಿಗೆ ಆರೋಗ್ಯ ಸಂರಕ್ಷಣೆಯ ಕುರಿತಾಗಿ ಮಾಹಿತಿ ನೀಡಿದರು. ವಿದ್ಯಾರ್ಥಿನಿಯರು, ಕಿಶೋರಿಯ ರಲ್ಲಿ ಹದಿಹರೆಯದ ಸಹಜ ಸಮಸ್ಯೆಗಳು ಕಾಣಿಸಿಕೊಂಡಾಗ ಕೈಗೊಳ್ಳಬೇಕಾದ ಪರಿಹಾರಗಳ ಕುರಿತಂತೆ ಡಾ. ಶುಭಾ ವಿವರಿಸಿದರು. ಲೋಳೆ ಸರ, ಗರಿಕೆ, ಮುಟ್ಟಿದರೆ ಮುನಿಗಿಡ, ಇಂಗು, ಅಡುಗೆ ಮನೆಯಲ್ಲಿ ಬಳಸುವ ಸಾಮಗ್ರಿಗಳಿಂದ ಅನೇಕ ಸಮಸ್ಯೆಗಳಿಗೆ ಮನೆಯಲ್ಲಿಯೇ ಔಷಧಿ ತಯಾರಿಕೆಯ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹಿತವಾಗಿ, ಮಿತವಾಗಿ, ಋತುವಿಗೆ ಅನುಗುಣವಾಗಿ ಆಹಾರಸೇವನೆ ಮಾಡಿದರೆ ಆರೋಗ್ಯಕ್ಕೆ ಯಾವದೇ ಸಮಸ್ಯೆಯುಂಟಾಗದು. ಆಯುರ್ವೇದದಲ್ಲಿ ತಿಳಿಸಿರುವಂತೆ ಸ್ಥಳೀಯವಾಗಿ ದೊರಕುವ ಹಣ್ಣು ಹಂಪಲು, ತರಕಾರಿ ಸೇವನೆಯಿಂದ ಆರೋಗ್ಯ ವೃದ್ಧಿಸಿಕೊಳ್ಳಬಹುದು.

ಭಗವದ್ಗೀತೆಯಲ್ಲಿ ಹೇಳಿರುವಂತೆ ಸಾತ್ವಿಕ, ರಾಜಸಿಕ, ತಾಮಸಿಕ ಆಹಾರ ಸೇವನೆಯಿಂದ ಶರೀರ ಮತ್ತು ಮನಸ್ಸಿನ ಮೇಲೆ ಪರಿಣಾಮ ಉಂಟಾಗುತ್ತದೆ. ಹೀಗಾಗಿ ಆಹಾರ ಸೇವನೆಗೂ ಗಮನ ನೀಡಬೇಕೆಂದು ಡಾ. ಶುಭಾ ರಾಜೇಶ್ ಸಲಹೆ ನೀಡಿದರು.

ಈ ಸಂದರ್ಭ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಎಚ್.ಟಿ. ಕಾರ್ಯದರ್ಶಿ ಪಿ.ಎಂ. ಸಂದೀಪ್, ಮಿಸ್ಟಿ ಹಿಲ್ಸ್ ನಿರ್ದೇಶಕರುಗಳಾದ ಬಿ.ಜಿ. ಅನಂತಶಯನ, ದೇವಣೀರ ತಿಲಕ್, ಪಿ.ಆರ್. ರಾಜೇಶ್, ಕಾಲೇಜು ಆಡಳಿತ ಮಂಡಳಿ ಕಾರ್ಯದರ್ಶಿ ಪಿ.ಎಂ. ಪೆಮ್ಮಯ್ಯ, ಪ್ರಾಂಶುಪಾಲೆ ದೇವಕಿ, ಶಿಕ್ಷಕಿಯರು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ವೈಯಕ್ತಿಕ ಆರೋಗ್ಯ ಮತ್ತು ದೈಹಿಕ ಶುಚಿತ್ವದ ಕುರಿತಂತೆ ಅನೇಕ ವಿದ್ಯಾರ್ಥಿನಿಯರು ಸಲಹೆ ಪಡೆದರು.