ವೀರಾಜಪೇಟೆ, ಜು. 19 : ಬೆಂಗಳೂರಿನ ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯಿಂದ ಪಟ್ಟಣ ಪಂಚಾಯಿತಿಗೆ ಕಳಿಸಿರುವ ಭೂ ಪರಿವರ್ತನೆ ಸಂಬಂಧದ ಸುತ್ತೋಲೆ ಆದೇಶವನ್ನು ಪಟ್ಟಣ ಪಂಚಾಯಿತಿ ಸರ್ವ ಸದಸ್ಯರು ತಿರಸ್ಕರಿಸಿ ನಿರ್ಣಯವನ್ನು ಅಂಗೀಕರಿಸಿದ್ದಾರೆ.

ತಾ. 18ರಂದು ಇ.ಸಿ.ಜೀವನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇ 4-2017 ರಂದು ಬಂದಿರುವ ಆದೇಶದಲ್ಲಿ 1976 ಹಾಗೂ ಇದಕ್ಕೆ ಮುಂಚಿನ ನಿವೇಶನಗಳು ಭೂ ಪರಿವರ್ತನೆಯಾಗದಿದ್ದರೆ ಅದನ್ನು ಕಂದಾಯ ಜಾಗವೆಂದು ಗುರುತಿಸಿ ಪರಿವರ್ತನೆಯಾಗುವ ತನಕ ಕಟ್ಟಡ ನಿರ್ಮಾಣಕ್ಕೆ ಟೌನ್ ಪ್ಲಾನಿಂಗ್ ತಾಂತ್ರಿಕ ಅಭಿಪ್ರಾಯ ನೀಡದಂತೆ ಆದೇಶಿಸಿರುವದು ಕಟ್ಟಡ ಮಾಲೀಕರಿಗೆ ಆತಂಕ ಹಾಗೂ ಕಿರುಕುಳವಾಗಿದ್ದು ಇದನ್ನು ಹಿಂದಕ್ಕೆ ಪಡೆಯದಿದ್ದರೆ ಗಡುವು ನೀಡಿ ನಂತರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಸಭೆ ತೀರ್ಮಾನಿಸಿತು.

ಪಟ್ಟಣ ಪಂಚಾಯಿತಿಗೆ ಬಂದಿ ರುವ ಸುತ್ತೋಲೆಯ ಆದೇಶದಿಂದಾಗಿ ಕಳೆದ ಮೂರು ತಿಂಗಳುಗಳಿಂದ ನಿವೇಶನದ ಮಾಲೀಕರಿಗೆ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುತ್ತಿಲ್ಲ. ಮಡಿಕೇರಿಯ ಟೌನ್ ಪ್ಲಾನಿಂಗ್ ಅಧಿಕಾರಿಗಳು ಇಲ್ಲಿನ ಪಟ್ಟಣ ಪಂಚಾಯಿತಿಯಿಂದ ಈ ಹಿಂದಿನಂತೆ ಕಳುಹಿಸಿದ ಎಲ್ಲಾ ಕಡತಗಳನ್ನು ವಾಪಾಸು ಕಳಿಸುತ್ತಿದ್ದಾರೆ. ಇದರಿಂದ ಪಟ್ಟಣ ಪಂಚಾಯಿತಿ ಆದಾಯಕ್ಕು ಪೆಟ್ಟು ಬೀಳುತ್ತಿದ್ದು ಈ ಆದೇಶವನ್ನು ರದ್ದು ಪಡಿಸಬೇಕೆಂದು ಸದಸ್ಯರುಗಳು ಸಭೆಯಲ್ಲಿ ಆಗ್ರಹಿಸಿದ್ದಾರೆ.

ತಾ. 17ರಂದು ವೀರಾಜಪೇಟೆ ಸಮುಚ್ಚಯ ಪೊಲೀಸ್ ಠಾಣೆಗಳಿಂದ ಇಲ್ಲಿನ ಕಾವೇರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವಿರಾಜಪೇಟೆ ವೃತ್ತದ ಪೊಲೀಸ್ ಗಸ್ತು ಸದಸ್ಯರುಗಳ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ.ಜೀವನ್ ಅವರನ್ನು ಪೊಲೀಸ್ ಅಧಿಕಾರಿಗಳು ವೇದಿಕೆಗೆ ಆಹ್ವಾನಿಸದಿರುವ ಪ್ರಸಂಗವನ್ನು ಸಭೆ ಖಂಡಿಸುತ್ತದೆ. ಇದರಿಂದ ಪಟ್ಟಣದ ಪ್ರಥಮ ಪ್ರಜೆಗೆ ಅವಮಾನ ಮಾಡಿದಂತಾಗಿದೆ. ಇದರಿಂದ ಎಲ್ಲಾ ಸದಸ್ಯರಿಗೂ ಅವಮಾನವಾಗಿದೆ. ಜೀವನ್ ಅವರು ಇತರ ಇಬ್ಬರು ಸದಸ್ಯರುಗಳೊಂದಿಗೆ ಸಭೆಗೆ ಹಾಜರಾಗಿ ಹಿಂದಿನ ಸಾಲಿನಲ್ಲಿ ಸಾರ್ವಜನಿಕರಂತೆ ಕುಳಿತು ಹಿಂದಿರುಗಿದ್ದಾರೆ. ಈ ವಿಷಯ ಸದಸ್ಯರುಗಳ ನಡುವೆ ವಿಸ್ತøತ ಚರ್ಚೆ ನಡೆದು ಸಭೆಯಲ್ಲಿ ಖಂಡನೆ ನಿರ್ಣಯವನ್ನು ಕೈಗೊಳ್ಳಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಜೀವನ್ ಅವರು ವೀರಾಜಪೇಟೆ ಪಟ್ಟಣದ ನಾಗರೀಕರಿಗೆ ವಾರಕ್ಕೊಂದು ಬಾರಿ ಕಡತ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವದು. ಇದರಿಂದ ಕಚೇರಿಯಲ್ಲಿ ಉಳಿಯುವ ಕಡತಗಳ ಶೀಘ್ರ ವಿಲೇವಾರಿಗೆ ಅವಕಾಶ ವಾಗುವದು ಇಲ್ಲಿನ ನಿವಾಸಿಗಳಿಗೂ ಅನುಕೂಲವಾಗುವದು ಎಂದರು. ಈ ನಿರ್ಧಾರಕ್ಕೆ ಸದಸ್ಯರು ಸರ್ವಾನುಮತದಿಂದ ಸಮ್ಮತಿಸಿದರು. ಸದ್ಯದಲ್ಲಿಯೇ ಕಡತ ವಿಲೇವಾರಿ ಆಂದೋಲನ ಹಮ್ಮಿಕೊಳ್ಳಲಾಗುವದು ಎಂದು ಸಭೆಗೆ ಜೀವನ್ ತಿಳಿಸಿದರು.