ಮಡಿಕೇರಿ, ಜು. 19: ಪಕ್ಷದ ವತಿಯಿಂದ ಮುಂಬರುವ ವಿಧಾನಸಭೆ ಚುನಾವಣೆಗೆ ರಣತಂತ್ರ ರೂಪಿಸಲು ಎಲ್ಲಾ ಕಾರ್ಯಕರ್ತರು ಒಗ್ಗೂಡಬೇಕು. ಮುಂದಿನ 10 ದಿನದ ಒಳಗೆ ಮಡಿಕೇರಿ ನಗರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರ ನೇಮಕ ಆಗಬೇಕು ಎಂದು ಎಐಸಿಸಿ ಕಾರ್ಯದರ್ಶಿ, ಮೈಸೂರು ವಿಭಾಗದ ಪಕ್ಷದ ಉಸ್ತುವರಿ ವೀಕ್ಷಕ ವಿಷ್ಣುನಾಥನ್ ಸೂಚಿಸಿದರು.

ನಗರದ ಕಮ್ಯೂನಿಟಿ ಹಾಲ್‍ನಲ್ಲಿ ನಡೆದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುವಲ್ಲಿ ಪಕ್ಷ ಸಂಘಟನೆಗೊಳಿಸಬೇಕು. ಪಕ್ಷದಲ್ಲಿ ಬಿನ್ನಮತ ಸಾಮಾನ್ಯ, ಇದನ್ನು ಪಕ್ಷದಲ್ಲಿಯೇ ಇತ್ಯರ್ಥಪಡಿಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ಮಾಡಿದರು.

ಬೂತ್ ವಾರ್ಡ್ ಮಟ್ಟದಲ್ಲಿ ಸಮಿತಿ ರಚನೆಯ ಕುರಿತು ನಾಯಕರು ಚರ್ಚೆ ನಡೆಸಬೇಕು, ಹೈಕಮಂಡ್ ಆದೇಶಕ್ಕೆ ಎಲ್ಲಾರು ತಲೆಬಾಗಬೇಕು, ಪಕ್ಷಕ್ಕೆ ಅಗೌರವ ತೋರುವ ಘಟನೆಗಳಿಗೆ ಅವಕಾಶ ಕೊಡಬಾರದು. ಒಗ್ಗೂಡಿ ಕೆಲಸ ಕಾರ್ಯಗಳನ್ನು ಮಾಡುವಂತೆ ವಿಷ್ಣುನಾಥನ್ ಹೇಳಿದರು.