ಮಡಿಕೇರಿ, ಜು.21 : ಪೊಲೀಸ್ ಸಿಬ್ಬಂದಿಗಳು ಸರಕಾರ ಮತ್ತು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವದು ಅಗತ್ಯವೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರಪ್ರಸಾದ್ ತಿಳಿಸಿದ್ದಾರೆ.

ರೋಟರಿ ಕ್ಲಬ್, ಇಂಡಿಯನ್ ಮೆಡಿಕಲ್ ಅಸೋಸಿಯೆಷನ್ ಮತ್ತು ಇನ್ನರ್ ವೀಲ್ ಸಹಯೋಗದಲ್ಲಿ ನಗರದ ರೋಟರಿ ಕ್ಲಬ್‍ನಲ್ಲಿ ಮಂಗಳೂರಿನ ಯೂನಿಟಿ ಆಸ್ಪತ್ರೆ ವತಿಯಿಂದ ಪೊಲೀಸ್ ಇಲಾಖೆ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳಿಗಾಗಿ ನಡೆದ ಶ್ವಾಸಕೋಶದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಯೋಗವನ್ನು ಜೀವನದ ಒಂದು ಭಾಗವಾಗಿ ಅಳವಡಿಸಿಕೊಂಡಾಗ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪ್ರಸ್ತುತ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದ್ದು, ಇವುಗಳನ್ನು ತಡೆಗಟ್ಟಲು ಪ್ರತಿಯೊಬ್ಬರು ಕಾಳಜಿ ತೋರಬೇಕು. ನಾವೆಷ್ಟು ವರ್ಷ ಜೀವಿಸುತ್ತೇವೆ ಎನ್ನುವದಕ್ಕಿಂತ ಎಷ್ಟು ವರ್ಷ ಆರೋಗ್ಯವಾಗಿರುತ್ತೇವೆ ಎನ್ನುವದು ಮುಖ್ಯ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಪಿ.ಯು.ಪ್ರೀತಂ ಮಾತನಾಡಿ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ರೋಟರಿ ಮೂಲಕ ನಡೆಸಲಾಗುವದೆಂದರು.

ಉದ್ಘಾಟನಾ ಸಮಾರಂಭದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೆಷನ್ ಅಧ್ಯಕ್ಷ ಡಾ.ಮೋಹನ್‍ಅಪ್ಪಾಜಿ, ರೋಟರಿ ಕ್ಲಬ್‍ನ ಕಾರ್ಯದರ್ಶಿ ಕೆ.ಎಸ್.ರತನ್ ತಮ್ಮಯ್ಯ, ಇನ್ನರ್ ವೀಲ್‍ನ ಅಧ್ಯಕ್ಷ ಲತಾಚಂಗಪ್ಪ, ಕಾರ್ಯದರ್ಶಿ ನಿಶಾ ಮೋಹನ್, ರೋಟರಿ ಕ್ಲಬ್‍ನ ಸದಸ್ಯರಾದ ಕಾರ್ಯಪ್ಪ, ರೋಟರಿ ಕ್ಲಬ್‍ನ ಆಡಳಿತಾಧಿಕಾರಿಗಳಾದ ಬಿ.ದೇವರಾಜ್, ಮಂಗಳೂರು ಯೂನಿಟಿ ಆಸ್ಪತ್ರೆಯ ಪ್ರಮುಖರಾದ ರವಿ ಉಪಸ್ಥಿತರಿದ್ದರು. ಮಂಗಳೂರು ಯೂನಿಟಿ ಆಸ್ಪತ್ರೆಯ ಶ್ವಾಸಕೋಶ ತಜ್ಞರಾದ ಡಾ.ಅಲ್ಕಾ ಸಿ.ಭಟ್ ಅವರ ತಂಡದ ನೇತೃತ್ವದಲ್ಲಿ ಶಿಬಿರ ನಡೆಯಿತು.