ಕೂಡಿಗೆ, ಜು. 20: ಸರಕಾರಿ ಶಾಲೆಯಲ್ಲಿ ದೊರಕುವ ಸೌಲಭ್ಯಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದ್ದು ಇದರ ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪೋಷಕರು ಮುಂದಾಗ ಬೇಕಿದೆ ಎಂದು ಜಿ.ಪಂ. ಸದಸ್ಯೆ ಕೆ.ಆರ್. ಮಂಜುಳಾ ಹೇಳಿದರು.ಶಾಲಾ ದತ್ತು ಯೋಜನೆಯಡಿ ಕೂಡ್ಲೂರಿನ ನೆಡ್ ಕಮಾಡಿಟೀಸ್ ಇಂಡಿಯಾ ಸಂಸ್ಥೆ ವತಿಯಿಂದ ರೂ 28 ಲಕ್ಷ ವೆಚ್ಚದಲ್ಲಿ ನವೀಕರಿಸಲಾದ ಕೂಡಿಗೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿ ದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ತಾಲೂಕು ಪಂಚಾಯಿತಿ ಸದಸ್ಯೆ ಸಬಿತಾ ಚನ್ನಕೇಶವ ಮಾತನಾಡಿ, ವಿದ್ಯಾರ್ಥಿ ಗಳು ಶೈಕ್ಷಣಿಕ ಹಂತದಿಂದಲೇ ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಬೇಕೆಂದರು.

ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೆಸ್ವಾಮಿ ಮಾತನಾಡಿದರು. ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಸಿ. ಪ್ರೇಮಲೀಲಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೆಡ್ ಕಮಾಡಿಟೀಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅನಿಲ್, ಹರೀಶ್, ವ್ಯವಸ್ಥಾಪಕ ಅಣ್ಣಪ್ಪ, ಸಿಬ್ಬಂದಿ ಸಂಪತ್ ಕುಮಾರ್ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಸಂಸ್ಥೆ ವತಿಯಿಂದ ಶಾಲೆಯಲ್ಲಿ ನೂತನವಾಗಿ ಒಂದು ಕೊಠಡಿ ನಿರ್ಮಾಣ, 4 ಕೊಠಡಿಗಳ ಮೇಲ್ಛಾವಣಿ ಮತ್ತು ಕಟ್ಟಡ ದುರಸ್ತಿ, ಕಂಪ್ಯೂಟರ್ ಮತ್ತು ವಿಜ್ಞಾನ ಪ್ರಯೋಗಾಲಯ, ಕಾಂಪೌಂಡ್, ಗೇಟ್, ಹೈಟೆಕ್ ಶೌಚಾಲಯ ನಿರ್ಮಾಣ ಹಾಗೂ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ವೇದಿಕೆಯಲ್ಲಿ ಉಪಾಧ್ಯಕ್ಷ ಕೆ.ಟಿ. ಗಿರೀಶ್, ಸದಸ್ಯರುಗಳಾದ ಕೆ.ಜಿ. ಮೋಹಿನಿ, ಕೆ.ಟಿ. ಈರಯ್ಯ, ಶಾಲಾ ಗೌರವಾಧ್ಯಕ್ಷ ಕೆ.ಟಿ. ವೆಂಕಟೇಶ್, ಕೆ.ಕೆ. ನಾಗರಾಜಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಅನಸೂಯ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಶಾಲಾ ಮುಖ್ಯ ಶಿಕ್ಷಕಿ ಎಸ್.ಯು. ಪಾರ್ವತಿ, ನೆಡ್ ಕಮಾಡಿಟಿ ಅಧಿಕಾರಿಗಳಾದ ಸಂಪತ್ ಕುಮಾರ್ ಇದ್ದರು.

ಶಾಲಾ ಮುಖ್ಯ ಶಿಕ್ಷಕಿ ಎಸ್.ಯು. ಪಾರ್ವತಿ ಸ್ವಾಗತಿಸಿದರು, ಸಹ ಶಿಕ್ಷಕಿ ವಾಣಿ ಪ್ರಾರ್ಥಿಸಿದರು, ಭಾಗ್ಯಮ್ಮ ನಿರೂಪಿಸಿದರು, ಶಾಲಾಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ ವಂದಿಸಿದರು.