ಮಣ್ಣಿನ ಪರೀಕ್ಷೆ ಮಾಡಿ ಅಗತ್ಯ ಪ್ರಮಾಣದಲ್ಲಿ ಮಣ್ಣಿಗೆ ಸುಣ್ಣ ಹಾಕಬೇಕೆಂದು ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಬಿ. ಪ್ರಭಾಕರ್ ಮಾಹಿತಿ ನೀಡಿದರು.

ಬಿರುನಾಣಿ ಟಿ. ಶೆಟ್ಟಿಗೇರಿಯ ಕೆ.ಕೆ.ಆರ್.ನ ಪೊರಾಡ್ ರಿವರ್ ಸೈಡ್ ಅಸೋಸಿಯೇಷನ್ ಸಭಾಂಗಣದಲ್ಲಿ ಕೃಷಿ ಇಲಾಖೆ, ಪರಂಪರಾಗತ ಕೃಷಿ ವಿಕಾಸ ಯೋಜನೆ, ಐ.ಸಿ.ಎ.ಆರ್, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಮತ್ತು ಪೊರಾಡು ಬಾಡಗರಕೇರಿ ಗ್ರಾಮದ ರಿವರ್‍ಸೈಡ್ ಅಸೋಸಿ ಯೇಷನ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬೆಳೆಗಾರರಿಗೆ ಕಾಳು ಮೆಣಸಿನ ಬೇಸಾಯದ ತರಬೇತಿ ಹಾಗೂ ಆರ್ಕಾ ಸೂಕ್ಷ್ಮಾಣು ಜೀವಿಗಳ ಬಳಕೆ ಹಾಗೂ ಪ್ರಯೋಜನದ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.

ಕಾಳುಮೆಣಸಿಗೆ ರಸಗೊಬ್ಬರ ಬಳಸಬಾರದು ಎಂಬ ಭಾವನೆ ಅನೇಕ ರೈತರಲ್ಲಿದ್ದು, ಇದು ತಪ್ಪು. ಕಾಳು ಮೆಣಸಿಗೆ ಅಗತ್ಯವಾದ ಹಾಗೂ ಸಮತೋಲನದ ರಸ ಗೊಬ್ಬರ ಹಾಗೂ ಲಘು ಪೋಷಕಾಂಶ ನೀಡಿದಾಗ ಮಾತ್ರ ಉತ್ತಮ ಗುಣಮಟ್ಟದ ಬೆಳೆ ಪಡೆಯಲು ಸಾಧ್ಯ ಎಂದು ಅವರು ಹೇಳಿದರು.

ಆದಷ್ಟು ಹೆಚ್ಚಾಗಿ ಸಿಂಪಡನೆ ಮೂಲಕ ನೀರಿನಲ್ಲಿ ಕರಗುವ ರಸಗೊಬ್ಬರ, ದ್ರವ ಸಾವಯವ ಗೊಬ್ಬರ ಹಾಗೂ ಲಘು ಪೋಷಕಾಂಶಗಳನ್ನು ನೀಡುವದು ಸಹ ಹೆಚ್ಚು ಪ್ರಯೋಜನ ಹಾಗೂ ಖರ್ಚು ಕಡಿಮೆಯಾಗುತ್ತದೆ ಎಂದು ಹೇಳಿದರು.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಸಂಶೋಧಿಸಿ ಉತ್ಪಾದಿಸು ತ್ತಿರುವ ಆರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹದ ಬಗ್ಗೆ ವಿಷಯ ತಜ್ಞ ಕೆ. ಪ್ರಭಾಕರ್ ಮಾಹಿತಿ ನೀಡಿ, ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಹಾಗೂ ಸಸ್ಯ ಬೆಳವಣಿಗೆಯನ್ನು ಪ್ರಚೋದಿಸುವ ಕಾರ್ಯಕ್ಷಮತೆಯನ್ನು ಈ ಉತ್ಪನ್ನ ಹೊಂದಿದ್ದು, ಕಾಳು ಮೆಣಸು ಬೆಳೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.

ಆರ್ಕಾ ಸೂಕ್ಷ್ಮಾಣು ಜೀವಿಗಳ ಬಳಕೆಯಿಂದ ಸಸ್ಯದ ಬೆಳವಣಿಗೆ ಮತ್ತು ಇಳುವರಿ ಅಧಿಕಗೊಳ್ಳುತ್ತದೆ. ಜೈವಿಕ ಗೊಬ್ಬರವನ್ನು ಬೀಜೋಪಚಾರ, ಮಣ್ಣಿಗೆ, ಕೊಟ್ಟಿಗೆ ಗೊಬ್ಬರಕ್ಕೆ ಮತ್ತು ತೆಂಗಿನ ನಾರಿಗೆ ಸೇರಿಸಿ ಬೆಳೆಗಳಿಗೆ ಬಳಸಬಹುದು.

ಶಿಪಾರಸ್ಸು ಮಾಡಿದ ಸಾರಜನಕ ಮತ್ತು ರಂಜಕ ಯುಕ್ತ ಗೊಬ್ಬರದಲ್ಲಿ ಶೇ. 25 ರಷ್ಟು ಪ್ರಮಾಣವನ್ನು ಕಡಿಮೆ ಮಾಡುತ್ತದೆ. ವಿವಿಧ ಬೆಳೆಗಳಿಗೂ ಇದನ್ನು ಬಳಸಬಹುದು. ಬೆಳೆಗಳಲ್ಲಿ ಶೇ. 10 ರಿಂದ 17 ರಷ್ಟು ಹೆಚ್ಚು ಇಳುವರಿ ಪಡೆಯಬಹುದು ಎಂದು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಹುದಿಕೇರಿ ಹೋಬಳಿ ಕೃಷಿ ಸಂಪರ್ಕ ಅಧಿಕಾರಿ ಮೀರಾ, ಪೊನ್ನಂಪೇಟೆ ಅರಣ್ಯ ಕಾಲೇಜಿನ ಮಹೇಶ್ವರಪ್ಪ, ರಿವರ್‍ಸೈಡ್ ಕಮ್ಯೂನಿಟಿ ಫಾರಂನ ಮೀದೇರಿರ ಸೋಮಣ್ಣ ಚಿಟ್ಟಿಯಪ್ಪ, ಕಾರ್ಯ ಕ್ರಮದ ಉಸ್ತುವಾರಿ ಬಲ್ಯಮೀದೇರಿರ ಶರಣ್ ಚಂಗಪ್ಪ, ಪೊರಾಡ್ ಯುವಕ ಸಂಘದ ಅಧ್ಯಕ್ಷ ಮೀದೆರಿರ ಬಿ. ವಿಜಯ ಹಾಜರಿದ್ದರು.