ನವದೆಹಲಿ, ಜು. 20: ತಾ. 17 ರಂದು ನಡೆದ ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಆಡಳಿತಾರೂಢ ಎನ್‍ಡಿಎ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರು ಶೇ. 65.65 ರಷ್ಟು ಮತಗಳನ್ನು ಪಡೆದು ಯುಪಿಎ ಅಭ್ಯರ್ಥಿ ಮೀರಾ ಕುಮಾರ್ ಅವರ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.ರಾಮನಾಥ್ ಕೋವಿಂದ್ ಅವರು 7,02,044 ಮತಗಳನ್ನು ಪಡೆದಿದ್ದಾರೆ. ಇನ್ನು ಪ್ರತಿಸ್ಪರ್ಧಿ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿ ಮೀರಾ ಕುಮಾರ್ ಅವರು 3,67,314 ಮತಗಳನ್ನು ಪಡೆದಿದ್ದು, ರಾಮನಾಥ್ ಕೋವಿಂದ್ 3,34,730 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಅಧಿಕಾರಿ ಅನೂಪ್ ಮಿಶ್ರಾ ಅವರು ಘೋಷಿಸಿದ್ದಾರೆ. ಕಳೆದ ಸೋಮವಾರ ಸಂಸತ್ ಭವನ ಸೇರಿ ಒಟ್ಟು 32 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ಭಾರತದ 14ನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡುವ ಚುನಾವಣೆಯಲ್ಲಿ

(ಮೊದಲ ಪುಟದಿಂದ) ಶೇ. 99 ರಷ್ಟು ಮತದಾನವಾಗಿತ್ತು. 15 ರಾಜ್ಯಗಳಲ್ಲಿ ಶೇ. 100 ರಷ್ಟು ಮತದಾನ ನಡೆದಿತ್ತು.

ಭಾರತದ 14ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ರಾಮನಾಥ್ ಕೋವಿಂದ್ ಅವರು ನಾನು ಬಡವರ ಮಧ್ಯೆ ಹುಟ್ಟಿ ಬೆಳೆದು ಈ ಮಟ್ಟಕ್ಕೆ ಬಂದಿದ್ದೇನೆ. ಹೀಗಾಗಿ ನಾನು ಬಡವರ ರಾಷ್ಟ್ರಪತಿ ಎಂದು ಹೇಳಲು ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ. ಇದು ನನ್ನ ಪಾಲಿಗೆ ಅತ್ಯಂತ ಭಾವನಾತ್ಮಕ ಕ್ಷಣ, ನಾನು ದೇಶದ ರಾಷ್ಟ್ರಪತಿ ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ನನ್ನ ಮೇಲೆ ವಿಶ್ವಾಸ ಇಟ್ಟಿದ್ದಕ್ಕೆ ಎಲ್ಲರಿಗೂ ಧನ್ಯವಾದ. ಇನ್ನು ನನ್ನು ಪ್ರತಿಸ್ಫರ್ಧಿಯಾದ ವಿಪಕ್ಷ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ಅವರಿಗೂ ಅಭಿನಂದನೆ ಹಾಗೂ ಶುಭಾಶಯವನ್ನು ತಿಳಿಸುತ್ತೇನೆ ಎಂದು ಹೇಳಿದರು. ನಾನು ಬಡವರ ಪ್ರತಿನಿಧಿಯಾಗಿ ರಾಷ್ಟ್ರಪತಿ ಭವನಕ್ಕೆ ಹೋಗುತ್ತಿದ್ದೇನೆ, ಎಲ್ಲರ ಹಿತದೃಷ್ಠಿಯಿಂದ ಕೆಲಸ ಮಾಡುತ್ತೇನೆ. ದೇಶದ ಸೇವೆಯಲ್ಲಿ ನನ್ನನ್ನು ನಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ ಎಂದರು.