ಸೋಮವಾರಪೇಟೆ, ಜು.24: ಸಮೀಪದ ಯಡವನಾಡು ಬಳಿ ಎರಡು ಕಾರುಗಳ ನಡುವೆ ಢಿಕ್ಕಿ ಸಂಭವಿಸಿ ಈರ್ವರು ಗಾಯಗೊಂಡಿ ರುವ ಘಟನೆ ಇಂದು ಸಂಜೆ ನಡೆದಿದೆ.ಸೋಮವಾರಪೇಟೆ ಪಟ್ಟಣದಿಂದ ಕುಶಾಲನಗರಕ್ಕೆ ತೆರಳುತ್ತಿದ್ದ 7ನೇ ಹೊಸಕೋಟೆಯ ಅಶೋಕ್ ಎಂಬವರು ಚಾಲಿಸುತ್ತಿದ್ದ ಬಲೆನೋ ಕಾರು, ಹಾರಂಗಿಯಿಂದ ಸೋಮವಾರಪೇಟೆ ಕಡೆಗೆ ಬರುತ್ತಿದ್ದ ಹಾನಗಲ್ಲು ಬಾಣೆ ಗ್ರಾಮದ ರಕ್ಷಿತ್ ಎಂಬವರು ಚಾಲಿಸುತ್ತಿದ್ದ ಆಲ್ಟೋ ಕಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಆಲ್ಟೋ ಕಾರಿನಲ್ಲಿ ಚರಣ್ ಮತ್ತು ಚಾಲಕ ರಕ್ಷಿತ್ ಅವರ ತಲೆಗೆ ಗಾಯವಾಗಿದ್ದು, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಅವಘಡದ ತೀವ್ರತೆಗೆ ಬಲೆನೋ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದರೆ, ಆಲ್ಟೋ ಕಾರಿನ ಒಂದು ಬದಿ ಜಖಂಗೊಂಡಿದೆ. ಎದುರು ಭಾಗದಿಂದ ಆಗಮಿಸಿದ ಚಾಲಕನ ಅಜಾಗರೂಕತೆಯ ಚಾಲನೆಯೇ ಅವಘಡಕ್ಕೆ ಕಾರಣ ಎಂದು ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳು ರಕ್ಷಿತ್ ದೂರು ನೀಡಿದ್ದಾರೆ.

ಸ್ಥಳಕ್ಕೆ ಸೋಮವಾರಪೇಟೆ ಠಾಣಾಧಿಕಾರಿ ಶಿವಣ್ಣ ಮತ್ತು ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದು, ಎರಡೂ ಕಾರುಗಳನ್ನು ಠಾಣೆಗೆ ಎಳೆತಂದು ಮುಂದಿನ ಕ್ರಮ ಕೈಗೊಂಡಿದ್ದಾರೆ.