ಸೋಮವಾರಪೇಟೆ, ಜು. 23: ತಾಲೂಕು ಯುವ ಒಕ್ಕೂಟ, ನೆಹರೂ ಯುವ ಕೇಂದ್ರ ಮತ್ತು ಜಿಲ್ಲಾ ಯುವ ಒಕ್ಕೂಟ ಸಂಯುಕ್ತ ಆಶ್ರಯದಲ್ಲಿ ಸಮೀಪದ ಶುಂಠಿಮಂಗಳೂರು ಬಸವೇಶ್ವರ ಯುವಕ ಸಂಘದ ಕಚೇರಿಯಲ್ಲಿ ವಿಶ್ವ ಕೌಶಲ್ಯ ದಿನಾಚರಣೆ ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಉಪನ್ಯಾಸಕಿ ಜ್ಯೋತಿ ಮಾತನಾಡಿ, ಯುವಕ-ಯುವತಿಯರು ಎಷ್ಟೇ ವಿದ್ಯಾವಂತರಾದರೂ, ಪ್ರಚಲಿತ ವಿದ್ಯಮಾನದೊಂದಿಗೆ ಸಮಾಜದ ಎಲ್ಲಾ ಆಗು-ಹೋಗುಗಳನ್ನು ತಿಳಿಯಬೇಕಾದುದು ಅಗತ್ಯ. ಸಮಾಜದಲ್ಲಿ ಎಲ್ಲರಿಗೂ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗದ ಅವಕಾಶಗಳು ದೊರಕುತ್ತಿಲ್ಲ. ಈ ನಿಟ್ಟಿನಲ್ಲಿ ಯುವಕ-ಯುವತಿಯರು ಸಮಯವನ್ನು ಹಾಳುಮಾಡದೆ, ಕ್ರಿಯಾಶೀಲರಾಗಿ ಸ್ವ ಉದ್ಯೋಗ ಅವಲಂಬಿಸಬೇಕೆಂದರು.

ಅಧ್ಯಕ್ಷತೆಯನ್ನು ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ವೈ.ಹೆಚ್. ರವಿ ವಹಿಸಿದ್ದರು. ವೇದಿಕೆಯಲ್ಲಿ ಯುವ ಒಕ್ಕೂಟದ ಪದಾಧಿಕಾರಿಗಳಾದ ಭಾನುಪ್ರಕಾಶ್, ಅಯ್ಯಪ್ಪ, ಎನ್.ಎಂ. ದಿವಾಕರ, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.