ಸೋಮವಾರಪೇಟೆ, ಜು. 25 : ಸಮೀಪದ ಗೌಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಹಲವಾರು ಸಮಯಗಳಿಂದ ಅನಾಥವಾಗಿ ತಿರುಗಾಡುತ್ತಿದ್ದ ವೃದ್ಧೆಯನ್ನು ವೃದ್ಧಾಶ್ರಮದಲ್ಲಿ ಆಶ್ರಯ ಕಲ್ಪಿಸಲು ಕರೆದೊಯ್ಯಲಾಯಿತು.

ಸುಮಾರು 70ರ ಪ್ರಾಯದ ವೃದ್ಧೆ ಮರಿಯಮ್ಮ ಅವರು ಕಳೆದ ಹಲವು ತಿಂಗಳುಗಳಿಂದ ಗೌಡಳ್ಳಿ ಭಾಗದಲ್ಲಿ ಸಂಚರಿಸಿಕೊಂಡು ಬಸ್‍ನಿಲ್ದಾಣದಲ್ಲಿ ತಂಗುತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಸಿಬ್ಬಂದಿ ಮತ್ತು ಮಡಿಕೇರಿಯ ಶ್ರೀ ಶಕ್ತಿ ವೃದ್ಧಾಶ್ರಮದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ವೃದ್ಧೆಯನ್ನು ಮಡಿಕೇರಿ ತ್ಯಾಗರಾಜ ಕಾಲೋನಿಯಲ್ಲಿರುವ ಶಕ್ತಿ ವೃದ್ಧಾಶ್ರಮಕ್ಕೆ ಕರೆದೊಯ್ಯಲಾಯಿತು.

ಈ ಸಂದರ್ಭ ನಾಗರಿಕ ಸಹಾಯವಾಣಿ ಕೇಂದ್ರದ ಕೃಷ್ಣಪ್ಪ, ಕಲ್ಯಾಣಾಧಿಕಾರಿ ದೇವರಾಜು, ವೃದ್ಧಾಶ್ರಮದ ಸತೀಶ್, ಗೌಡಳ್ಳಿ ಗ್ರಾ.ಪಂ. ಅಧ್ಯಕ್ಷ ಧರ್ಮಾಚಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.