ಮಡಿಕೇರಿ, ಜು. 25: ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿರುವದ ರಿಂದ ಭತ್ತ ಮತ್ತು ಮುಸುಕಿನ ಜೋಳ ನಾಟಿ ಕಾರ್ಯ ಆರಂಭವಾಗಿದೆ. ಜಿಲ್ಲೆಯಲ್ಲಿ ಭತ್ತ ಬೆಳೆಯುವ 30,500 ಹೆಕ್ಟೇರ್ ಗುರಿಗೆ 6,195 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯವಾಗಿದೆ. ಮುಸುಕಿನ ಜೋಳ 4 ಸಾವಿರ ಹೆಕ್ಟೇರ್ ಗುರಿಗೆ 3,590 ಹೆಕ್ಟೇರ್ ಬಿತ್ತನೆಯಾಗಿ, ಭತ್ತ ನಾಟಿ ಮತ್ತು ಮುಸುಕಿನ ಜೋಳ ಬಿತ್ತನೆ ಕಾರ್ಯ ಮುಂದುವರಿದಿದೆ. ಅಲ್ಪಾವಧಿ ಭತ್ತ ತಳಿ ಬಿತ್ತನೆ ಮಾಡಬೇಕಿದ್ದಲ್ಲಿ ಹೈಬ್ರಿಡ್ ಭತ್ತ ಹಾಗೂ ಐ.ಆರ್.64 ಬಿತ್ತನೆ ಮಾಡಬಹುದಾಗಿದೆ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ರಮೇಶ್ ಮಾಹಿತಿ ನೀಡಿದ್ದಾರೆ.

ನಾಟಿ ಯಂತ್ರ ಬಳಸಿ ಭತ್ತ ನಾಟಿ ಮಾಡುವ ರೈತರಿಗೆ ಪ್ರತಿ ಹೆಕ್ಟೇರ್‍ಗೆ 4 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತದೆ. ಒಬ್ಬ ರೈತರಿಗೆ 2 ಹೆಕ್ಟೇರ್‍ಗೆ ಮಾತ್ರ ಮಿತಿಯನ್ನು ಒಳಗೊಂಡಿದೆ. ರೈತರು ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರದಲ್ಲಿ ಪಡೆಯಬಹುದಾಗಿದೆ. ರಸಗೊಬ್ಬರ ವನ್ನು ಸಹಕಾರ ಸಂಘಗಳು ಹಾಗೂ ಖಾಸಗಿಯಾಗಿ ಪಡೆದುಕೊಳ್ಳ ಬಹುದಾಗಿದೆ ಎಂದು ತಿಳಿಸಿದ್ದಾರೆ.

ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಯಡಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸಲು ಮುಂದಾಗಿದ್ದು, ಆ ನಿಟ್ಟಿನಲ್ಲಿ ಪ್ರಧಾನಮಂತ್ರಿ ಫಸಲು ಭೀಮಾ ಯೋಜನೆ ನೋಂದಣಿಗೆ ಕಾಲಾವಕಾಶ ನೀಡಲಾಗಿದೆ. ಮುಸುಕಿನ ಜೋಳ ನೋಂದಣಿಗೆ ಜುಲೈ, 31 ಕೊನೆಯ ದಿನವಾಗಿದೆ. ಭತ್ತಕ್ಕೆ ನೋಂದಣಿ ಮಾಡಲು ಆಗಸ್ಟ್, 14 ಕೊನೆಯ ದಿನವಾಗಿದೆ. ವಿಮಾ ಮೊತ್ತವು ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ. ಕರ್ನಾಟಕ ರೈತ ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಯು ಬೆಳೆ ಸಾಲ ಪಡೆದ ರೈತರಿಗೆ ಕಡ್ಡಾಯವಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.