ಸುಂಟಿಕೊಪ್ಪ, ಜು. 26: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ 11ಬಿ ನಮೂನೆ ಯನ್ನು ನೀಡುತ್ತಿಲ್ಲ ಎಂದು ಆಕ್ರೋಶ ಗೊಂಡ ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದ ಘಟನೆ ಬುಧವಾರ ನಡೆದಿದೆ.ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಬಡಾವಣೆಗಳಲ್ಲಿ ಪರಿವರ್ತನೆಗೊಂಡ ಜಾಗಕ್ಕೆ ಈ ಹಿಂದಿನ ಪಿಡಿಓಗಳು 11ಬಿ ನಮೂನೆಯನ್ನು ನೀಡಿದ್ದು,ಆದರೆ ಆ ಬಡಾವಣೆಯ ಉಳಿದ ಕೆಲವು ಜಾಗಕ್ಕೆ ಈಗಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು 11ಬಿ ನಮೂನೆ ಯನ್ನು ನೀಡುತ್ತಿಲ್ಲ ಎಂದು ಅಸಾಮಾದಾನಗೊಂಡ ಸದಸ್ಯರು ತರಾಟೆಗೆ ತೇಗೆದುಕೊಂಡರು.

ಈ ಸಂದರ್ಭ ಮಾತನಾಡಿದ ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್,ಕಳೆದ 6 ತಿಂಗಳುಗಳಿಂದ ಈ ಬಗ್ಗೆ ಚರ್ಚೆ ನಡೆಸುತ್ತಿದ್ದು, 3 ಬಾರಿ ಸಾಮಾನ್ಯ ಸಭೆ ನಡೆದಿದೆ. ಆದರೆ ಈ ಬಗ್ಗೆ ಅಭಿವೃದ್ಧಿ

(ಮೊದಲ ಪುಟದಿಂದ) ಅಧಿಕಾರಿಗಳನ್ನು ಕೇಳಿದಾಗ ಯಾವದೇ ಪ್ರತಿಕ್ರಿಯೆ ನೀಡದೇ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಯವರು ಆದೇಶ ನೀಡಿದರೇ 11ಬಿ ನೀಡುವದಾಗಿ ಹೇಳಿದ್ದಾರೆ. ಆದರೆ ಈ ಹೇಳಿಕೆ ಸರಿಯಲ್ಲ. 2 ದಿನಗಳ ಸಮಯಾವಕಾಶ ನೀಡುತ್ತಿದ್ದು, ತಪ್ಪಿದಲ್ಲಿ ಸಾರ್ವಜನಿಕರೊಂದಿಗೆ ಸೇರಿ ಎಲ್ಲ ಸದಸ್ಯರು ಪ್ರತಿಭಟನೆ ಮಡಬೇಕಾಗುತ್ತದೆ ಎಂದರು.

ಸದಸ್ಯ ಶ್ರೀಧÀರ್ ಕುಮಾರ್ ಮಾತನಾಡಿ, ಶಿವರಾಮ ರೈ ಬಡಾವಣೆಯಲ್ಲಿ 1998 ರಲ್ಲಿ, ರಮಾನಾಥ ರೈ, ಶುಭರೈ ಅವರ ಜಾಗವು 1999ರಲ್ಲಿ, ಪಾರ್ವತಮ್ಮ ಬಡಾವಣೆ 2001ರಲ್ಲಿ ಭೂ ಪರಿವರ್ತನೆಗೊಂಡು ಈ ಹಿಂದಿನ ಪಿಡಿಓಗಳು 11ಬಿಯನ್ನು ನೀಡಿದ್ದಾರೆ. ಆದರೆ ಅದರಲ್ಲಿ ಉಳಿಕೆಯಾದ ಕೆಲವು ಜಾಗವು ಭೂ ಪರಿವರ್ತನೆ ಯಾಗಿದ್ದರೂ ಯಾವ ಕಾರಣಕ್ಕಾಗಿ ಇಂದಿನ ಅಭಿವೃದ್ದಿ ಅಧಿಕಾರಿ ನಮೂನೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯ ಕೆ.ಇ.ಕರೀಂ ಮಾತನಾಡಿ, ಉಳಿಕೆಯಾದ ಬಡಾವಣೆಗಳ ಜಾಗವು ಕೂಲಿಕಾರ್ಮಿಕರದಾಗಿದ್ದು, ಅವರು ಕಷ್ಟಪಟ್ಟು ದುಡಿದು ಉಳಿಸಿದ ಹಣದಿಂದ ಜಾಗವನ್ನು ಖರೀದಿಸಿದ್ದು, ಆ ಬಡ ಕಾರ್ಮಿಕರಿಗೆ ಇದರಿಂದ ತೊಂದರೆಯಾಗಲಿದೆ ಎಂದು ಹೇಳಿದರು. ಕೂಡಲೇ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಬೋಪಯ್ಯ, ಈಗಾಗಲೇ ಮುಖ್ಯ ಕಾರ್ಯನಿರ್ವಹಣಾಧಿ ಕಾರಿಗಳು ಆದೇಶವನ್ನು ರವಾನಿಸಿದ್ದು ಇದರನ್ವಯ 2013ರ ನಂತರದ ಬಡಾವಣೆಗಳಿಗೆ 11ಬಿ ನಮೂನೆ ನೀಡದಂತೆ ಹಾಗೂ ಅದಕ್ಕೆ ಸಂಬಂಧಿಸಿದ ಕೇಲವೊಂದು ಕಾನೂನುಗಳನ್ನು ಪಾಲಿಸುವಂತೆ ಆದೇಶಿಸಿದ್ದಾರೆ. ಅದರಂತೆ ತಾನೂ ನಡೆದುಕೊಳ್ಳುವದಾಗಿ, ಒಂದು ವೇಳೆ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದಲ್ಲಿ ತಾನು 11ಬಿ ನಮೂನೆ ನೀಡುವದಾಗಿ ತಿಳಿಸಿದರು.