ಸೋಮವಾರಪೇಟೆ, ಜು. 29: ದಲಿತ ವ್ಯಕ್ತಿಯೋರ್ವರ ಮೇಲೆ ದೌರ್ಜನ್ಯವೆಸಗಿ ಜಾತಿನಿಂದನೆ ಮಾಡಿದ ವ್ಯಕ್ತಿಗಳ ವಿರುದ್ಧ ಶನಿವಾರಸಂತೆ ಠಾಣಾಧಿಕಾರಿ ಮೊಕದ್ದಮೆ ದಾಖಲಿಸದಿದ್ದರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವದು ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ (ಲಕ್ಷ್ಮೀ ನಾರಾಯಣ ನಾಗವಾರ ಬಣ) ಜಿಲ್ಲಾ ಸಂಚಾಲಕ ಎಂ.ಎಸ್. ವಿರೇಂದ್ರ ಎಚ್ಚರಿಸಿದ್ದಾರೆ.

ಶನಿವಾರಸಂತೆ ಗುಡುಗಳಲೆ ಆಟೋ ನಿಲ್ದಾಣದ ಈರ್ವರು ಆಟೋ ಚಾಲಕರು ಪರಿಶಿಷ್ಟ ಜಾತಿಯ ಶಿವಣ್ಣ ಎಂಬವರಿಗೆ ಹಳೆ ದ್ವೇಷದಿಂದ ಹಲ್ಲೆ ನಡೆಸಿ, ಜಾತಿನಿಂದನೆ ಮಾಡಿದ್ದು, ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ದೂರು ನೀಡಿದರೂ ಠಾಣಾಧಿಕಾರಿ ಆರೋಪಿಗಳ ಪರ ನಿಂತು, ದೂರುದಾರರಿಗೆ ನ್ಯಾಯ ಕೊಡಿಸಿಲ್ಲ ಎಂದು ದೂರಿದರು.

ಮುಂದಿನ ಒಂದು ವಾರದ ಒಳಗೆ ಆರೋಪಿಗಳ ವಿರುದ್ಧ ದೂರು ದಾಖಲಿಸದಿದ್ದರೆ, ದೌರ್ಜನ್ಯಕ್ಕೊಳಗಾದ ಕುಟುಂಬದವರೊಂದಿಗೆ ಮಡಿಕೇರಿ ಎಸ್‍ಪಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವದು ಎಂದು ಹೇಳಿದರು.