ವೀರಾಜಪೇಟೆ, ಜು. 30: ಹೆಗ್ಗಳ ಬೂದಿಮಾಳದ ಪಾಲ್ಟಿಮಕ್ಕಿ ಎಂಬಲ್ಲಿ ಕ್ರೈಸ್ತ ಗುಡಿ ನಿರ್ಮಾಣದ ಸ್ಥಳಕ್ಕೆ ಇಂದು ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಗ್ರಾಮಸ್ಥರು, ಇತರ ಧರ್ಮದವರಿಗೆ ತೊಂದರೆಯಾಗದ ರೀತಿಯಲ್ಲಿ ಶಾಂತಿ ಕಾಪಾಡಿಕೊಂಡು ಸ್ವಂತ ಜಾಗದಲ್ಲಿ ಗುಡಿ ನಿರ್ಮಿಸುವಂತೆ ಜಾಗದ ಮಾಲೀಕರಿಗೆ ನಿರ್ದೇಶನ ನೀಡಿದರು.

ಪಾಲ್ಟಿಮಕ್ಕಿಯ ಜಾನ್ ಡಿಸೋಜ ಎಂಬವರು ಚರ್ಚ್ ನಿರ್ಮಿಸಿ ಮತಾಂಧತೆಯಲ್ಲಿ ತೊಡಗುವರೆಂಬ ದೂರಿನ ಮೇರೆ ವೀರಾಜಪೇಟೆ ವಲಯದ ಡಿ.ವೈ.ಎಸ್.ಪಿ. ನಾಗಪ್ಪ ಹಾಗೂ ತಾಲೂಕು ತಹಶೀಲ್ದಾರ್ ಅವರಿಗೆ ಚರ್ಚ್ ಕಟ್ಟಡ ನಿರ್ಮಾಣ ತಡೆಯುವಂತೆ ದೂರು ಮನವಿ ಸಲ್ಲಿಸಿದ ಸಂಬಂಧ ಡಿ.ವೈಎಸ್‍ಪಿ. ನಾಗಪ್ಪ ಅವರು ಸಿಬ್ಬಂದಿಗಳೊಂದಿಗೆ ನಿನ್ನೆ ದಿನ ರಾತ್ರಿ ಸ್ಥಳಕ್ಕೆ ತೆರಳಿ ಸಣ್ಣ ಗುಡಿಯ ಮೇಲೆ ಧರ್ಮದ ಸಾಂಪ್ರದಾಯಿಕವಾಗಿ ನಿರ್ಮಿಸಿದ್ದ ಭಾರೀ ದೊಡÀ್ಡ ಕಬ್ಬಿಣದ ಕೊಡೆಯನ್ನು ತೆಗೆಯುವಂತೆ ಜಾಗದ ಮಾಲೀಕರಿಗೆ ಆದೇಶಿಸಿದ್ದರಿಂದ ಇಂದು ಬೆಳಿಗ್ಗೆ ಕೊಡೆಯನ್ನು ತೆಗೆಯಲಾಗಿದೆ. ಗುಡಿಯಲ್ಲಿ ಏಸು ಹಾಗೂ ಮಾತೆ ಮರಿಯಮ್ಮನ ವಿಗ್ರಹವನ್ನು ಇಡಲಾಗಿದೆ. ಇದರಿಂದ ಯಾರಿಗೂ ತೊಂದರೆ ಇಲ್ಲ. ಗ್ರಾಮಸ್ಥರು ಪರಸ್ಪರ ಸಹಕಾರದಿಂದ ಶಾಂತಿ ಸಹಬಾಳ್ವೆಗೆ ಅವಕಾಶ ನೀಡುವಂತೆ ಹಾಗೂ ಗುಡಿ ನಿರ್ಮಾಣದ ಸಂಬಂಧದಲ್ಲಿ ಡಿ.ವೈಎಸ್.ಪಿ. ಅವರು ನೈಜ ವರದಿಯನ್ನು ನೀಡಿರುವದಾಗಿ ವೀಣಾ ಅಚ್ಚಯ್ಯ ಹೇಳಿದರು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಸಮಿತಿಯ ಅಧ್ಯಕ್ಷ ಶಿವು ಮಾದಪ್ಪ ಮಾತನಾಡಿ, ಜಾನ್ ಅವರು ಸ್ವಂತ ಜಾಗದಲ್ಲಿ ಯಾರಿಗೂ ತೊಂದರೆ ಯಾಗದಂತೆ ಅವರ ಕುಟುಂಬಕ್ಕಾಗಿ ಗುಡಿ ನಿರ್ಮಾಣ ಮಾಡುತಿದ್ದಾರೆ. ಗ್ರಾಮದಲ್ಲಿ ಪರಸ್ಪರ ಸಹಕಾರದಿಂದ ಅನ್ಯೋನ್ಯತೆಯಿಂದ ಬದುಕುವಂತಾಗ ಬೇಕು. ಯಾರಲ್ಲಿಯೂ ಯಾವದೇ ದುರದ್ದೇಶ ಇರಬಾರದು ಎಂದರು. ಗ್ರಾಮಸ್ಥರು ಶಾಂತಾಚಿತ್ತರಾಗಿ ಜೀವನ ನಡೆಸಬೇಕೆಂಬುದು ಪಕ್ಷದ ಆಶಯ ಎಂದರು.

ಗುಡಿ ನಿರ್ಮಾಣ ಹಾಗೂ ಜಾಗದ ಮಾಲೀಕನಾದ ಜಾನ್ ಡಿಸೋಜಾ ಮಾತನಾಡಿ ನನ್ನ ಸ್ವಂತ ಜಾಗದಲ್ಲಿ ಮೃತ ಮಗನ ಹೆಸರಿನಲ್ಲಿ ದೇವರ ಹೆಸರಿನಲ್ಲಿ ಗುಡಿ ನಿರ್ಮಿಸುತ್ತಿದ್ದೇನೆ. ಇದರಲ್ಲಿ ಯಾವದೇ ದುರುದ್ದೇಶವಿಲ್ಲ. ಜಾತಿಯ ಮನೋಭಾವವೂ ಇಲ್ಲ. ನಾನು ಯಾವದೇ ಕ್ರೈಸ್ತ ದೇವಾಲಯ ವಾಗಲಿ, ಕ್ರೈಸ್ತರ ಸಮುದಾಯದ ಭವನ ನಿರ್ಮಿಸುತ್ತಿಲ್ಲ. ಇದು ಕೆಲವು ಆಸಕ್ತರ ಊಹಾಪೋಹದ ವದಂತಿ. ಗ್ರಾಮಸ್ಥರ ಒಮ್ಮತಕ್ಕೆ ನಮ್ಮ ಸಹಕಾರವು ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬೆಲ್ಲು ಬೋಪಯ್ಯ, ಆರ್.ಎಂ.ಸಿ.ಸದಸ್ಯ ಮಾಳೇಟಿರ ಬೋಪಣ್ಣ, ಜಿ.ಜಿ. ಮೋಹನ್, ಏಜಾಜ್ ಅಹಮ್ಮದ್. ಸುರೇನ್ ಕಟ್ಟಿ, ಚೇರಿನ್ ಚಂಗಪ್ಪ, ಲೈಲಾ ಜೋಸೆಫ್, ಮಹಮ್ಮದ್ ರಾಫಿ, ಜಾನ್ ಅವರ ಸಹೋದರ ಜೋಸೇಫ್ ಡಿಸೋಜ ಹಾಗೂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.