ಸೋಮವಾರಪೇಟೆ, ಜು. 31: ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಪ್ರವಾಸಿಗರ ನೆಚ್ಚಿನ ತಾಣ ಮಲ್ಲಳ್ಳಿ ಜಲಪಾತ ಸೇರಿದಂತೆ ಸಣ್ಣಪುಟ್ಟ ಜಲಪಾತಗಳು ಮೈದುಂಬಿದ್ದು, ಎಲ್ಲರನ್ನೂ ಆಕರ್ಷಿಸುತ್ತಿವೆ. ಶಾಂತಳ್ಳಿ ಹೋಬಳಿಯಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಮಲ್ಲಳ್ಳಿ ಹಾಗೂ ಅಭಿಮಠ ಬಾಚಳ್ಳಿ ಜಲಪಾತಗಳು ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಗರ್ವಾಲೆ, ಸೂರ್ಲಬ್ಬಿ, ಮುಟ್ಲು, ಹಮ್ಮಿಯಾಲಗಳಲ್ಲೂ ವರ್ಷಾಧಾರೆಯಾಗುತ್ತಿರುವ ಹಿನ್ನೆಲೆ ಗರ್ವಾಲೆ ಭಾರತೀಯ ವಿದ್ಯಾಭವನದ ಎದುರಿನ ಜ್ಞಾನಗಂಗಾ ಜಲಪಾತ ಮೈದುಂಬಿ ಹರಿಯುತ್ತಿದೆ. ಇದರೊಂದಿಗೆ ಮಾದಾಪುರ ಹೊಳೆಯಲ್ಲಿ ಪ್ರಕೃತಿ ನಿರ್ಮಿತವಾಗಿರುವ ಗರ್ವಾಲೆ ಸಮೀಪದ ಮೇದುರ ಜಲಪಾತ ಕಂಗೊಳಿಸುತ್ತಿದ್ದು, ದಾರಿಹೋಕರನ್ನೂ ಸೇರಿದಂತೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ನಿಸರ್ಗ ರಮಣೀಯ ಸೌಂದರ್ಯದ ನಡುವೆ ಹಾಲ್ನೊರೆ ಸೂಸುತ್ತಾ ಧುಮ್ಮಿಕ್ಕುವ ಜಲಪಾತಗಳು ಪ್ರಕೃತಿ ಪ್ರಿಯರನ್ನು ತನ್ನತ್ತ ಸೆಳೆಯುತ್ತಿವೆ. ಪ್ರಕೃತಿ ನಿರ್ಮಿತ ಜಲಪಾತಗಳ ಸೊಬಗನ್ನು ಅನುಭವಿಸಲು ವಾರದ ಕೊನೆಯ ದಿನಗಳಲ್ಲಿ ಹೆಚ್ಚಾಗಿ ಪ್ರವಾಸಿU್ಪರು ಭೇಟಿ ನೀಡುತ್ತಿದ್ದಾರೆ.

- ವಿಜಯ್ ಹಾನಗಲ್