ಶ್ರೀಮಂಗಲ, ಜು. 31: ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಹುಲಿ ಧಾಳಿ ಮರುಕಳಿಸಿದ್ದು, ಕಳೆದ 20 ದಿನಗಳಿಂದ 4ನೇ ಘಟನೆಯಲ್ಲಿ ಒಂದು ಹಾಲು ಕರೆಯುವ ಹಸು, ಇನ್ನೊಂದು ಗಬ್ಬದ ಹಸು ಸೇರಿ ಎರಡು ಹಸುಗಳು ಬಲಿಯಾಗಿವೆ. ಇನ್ನೊಂದು ಗಬ್ಬದ ಹಸು ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದೆ.ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಬೀರುಗ ಗ್ರಾಮದಲ್ಲಿ ರೈತ ಉಪ್ಪಾರರ ಶಶಿಧರ್ (ಕಿಟ್ಟ) ಅವರು ಕೊಟ್ಟಿಗೆಯಲ್ಲಿ ಕಟ್ಟಿದ್ದ ತಮ್ಮ ಹಸುಗಳನ್ನು ಮೇಯಲು ಹೊರಗೆ ಕಟ್ಟಲು ತೆರಳುತ್ತಿದ್ದ ಸಂಧರ್ಭ ಇಂದು ಬೆಳಗ್ಗೆ ಏಕಾಏಕಿ ಹುಲಿ ಧಾಳಿ ನಡೆಸಿದೆ. ಈ ಸಂದರ್ಭ ಎರಡು ಹಸುಗಳನ್ನು ಶಶಿಧರ್ ಅವರ ಕಣ್ಣ ಮುಂದೆಯೇ ಧಾಳಿ ನಡೆಸಿ ಹುಲಿ ಕೊಂದು ಹಾಕಿದೆ. ಹಸುಗಳನ್ನು ಮೇಯಲು ಕಟ್ಟುತ್ತಿದ್ದ ಸಂದರ್ಭವೇ ಹುಲಿ ಅವುಗಳ ಮೇಲೆ ಎರಗಿದ್ದು, ಈ ಸಂದರ್ಭ ಹಗ್ಗವನ್ನು ತುಂಡರಿಸಿ ಹುಲಿ ಧಾಳಿಯಿಂದ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಎರಡು ಹಸುಗಳ ಮೇಲೆ ಎರಗಿ ಕೊಂದು ಹಾಕಿದ ಬೆನ್ನಲ್ಲೆ ಧಾಳಿಯಿಂದ ಬೆದರಿ ಓಡುತ್ತಿದ್ದ ಮತ್ತೊಂದು ಹಸುವನ್ನು ಸಹ ಬೆನ್ನಟ್ಟಿದ ಹುಲಿ ಮೊದಲು ಅದರ ಕುತ್ತಿಗೆಯನ್ನು ಕಚ್ಚಿ ಹಿಡಿದುಕೊಂಡಿತ್ತು.