ಸಿದ್ದಾಪುರ, ಜು. 30: ಸಿದ್ದಾಪುರ ಸಮುದಾಯ ಕೇಂದ್ರಕ್ಕೆ ಸರಕಾರವು ಕೂಡಲೇ ವೈದ್ಯರನ್ನು ನೇಮಕ ಮಾಡಬೇಕೆಂದು ಶಾಸಕ ಕೆ.ಜಿ ಬೋಪಯ್ಯ ಒತ್ತಾಯಿಸಿದ್ದಾರೆ.ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಅವರು, ಆಸ್ಪತ್ರೆಯ ಸೌಲಭ್ಯಗಳು ಸೇರಿದಂತೆ ವಾರ್ಡ್‍ಗಳನ್ನು ಪರಿಶೀಲಿಸಿದರು. ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರವು ಸುಸಜ್ಜಿತ ಆಸ್ಪತ್ರೆಯಾಗಿದ್ದು, ಈ ಭಾಗದಲ್ಲಿ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಆದರೇ ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರು ತೆರಳದ ಹಿನ್ನೆಲೆಯಲ್ಲಿ ವೈದ್ಯರ ಕೊರತೆ ಇದೆ. ಕೂಡಲೇ ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರುಗಳನ್ನು ಸರಕಾರ ನೇಮಕ ಮಾಡಬೇಕೆಂದು ಒತ್ತಾಯಿಸಿದರು. ಆಸ್ಪತ್ರೆಯಲ್ಲಿ ಔಷಧಿಗಳು ಸಮರ್ಪಕವಾಗಿ ಲಭ್ಯವಿದ್ದು, ಇಲ್ಲದ ಔಷಧಿಗಳ ಪೂರೈಕೆಗೆ ಜಿಲ್ಲಾ ಆರೋಗ್ಯ ಅಧಿಕಾರಿಗೆ ಸೂಚಿಸಲಾಗುವುದು ಎಂದರು.

ಈ ಸಂದರ್ಭ ಜಿ.ಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ, ತಾ.ಪಂ ಸದಸ್ಯ ಜನೀಶ್, ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಡಿ ನಾಣಯ್ಯ, ಬಿ.ಜೆ.ಪಿ ಮುಖಂಡರಾದ ಮಲ್ಲಂಡ ಮಧು, ಅನಿಲ್ ಶೆಟ್ಟಿ, ಮನೋಹರ, ಕುಟ್ಟಂಡ ಗಣಪತಿ, ಕಿಶೋರ್ ಸೇರಿದಂತೆ ಇನ್ನಿತರರು ಇದ್ದರು.