ಮಡಿಕೇರಿ, ಆ.1 : ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ಧಿ ಪಡೆದಿರುವ ಕೊಡಗಿನ ಹಚ್ಚ ಹಸಿರಿನ ಪರಿಸರ ನೋಡಲು ಅತಿ ಸುಂದರ. ಈ ಪ್ರಕೃತಿ ರಮಣೀಯ ಸೌಂದರ್ಯವನ್ನು ಮಳೆಯಲ್ಲೆ ನಡೆದು, ನೆನೆದು ಕಣ್ತುಂಬಿಸಿಕೊಳ್ಳುವದೆಂದರೆ ಅದರ ಅನುಭವವೇ ಬೇರೆ.

“ಪ್ರಕೃತಿಯೆಡೆಗೆÉ ಮಳೆ ನಡಿಗೆ” ಎಂಬ ಕಾರ್ಯಕ್ರಮದಲ್ಲಿ ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೆ ದಿನವಿಡೀ ಪ್ರಕೃತಿಯೊಂದಿಗೆ ಸಂಭ್ರಮಿಸಿದವರು ಮಡಿಕೇರಿಯ ಆರೋಹಣ ಕೊಡಗು ತಂಡದ ಚಾರಣ ಪ್ರಿಯರು.

ಆರೋಹಣ ಕೊಡಗು ತಂಡದ ಇ.ಎಲ್.ಸುರೇಶ್, ಕೆ.ಕೆ.ಮಹೇಶ್ ಕುಮಾರ್, ಧನಂಜಯ ನೇತೃತ್ವದಲ್ಲಿ ಮಡಿಕೇರಿ ಸಮೀಪದ ನಿಶಾನಿ ಬೆಟ್ಟಕ್ಕೆ ಚಾರಣ ನಡೆಯಿತು. ಚಾರಣರಲ್ಲಿ ಸುಮಾರು 50 ಕ್ಕೂ ಹೆಚ್ಚು ಪ್ರಕೃತಿ ಪ್ರಿಯರು ಪಾಲ್ಗೊಂಡಿದ್ದರು.

ಬೆಳಗ್ಗೆ ನಗರದ ಶ್ರೀ ಓಂಕಾರೇಶ್ವರ ದೇವಾಲಯದಿಂದ ಆರಂಭಗೊಂಡ ಚಾರಣ ರಾಜಾಸೀಟ್, ಸ್ಟೋನ್‍ಹಿಲ್, ಪಂಪ್‍ಹೌಸ್ ಮೂಲಕ ಮೊಣ್ಣಂಗೇರಿಯ ತಾಜ್ ನಂತರ ತುಂತುರು ಮಳೆಯಲ್ಲೇ ಚಾರಣ ಪ್ರಿಯರು ಕಡಿದಾದ ಅರಣ್ಯ ಪ್ರದೇಶವನ್ನು ಪ್ರವೇಶಿಸಿದರು.

ಅಲ್ಲಿದ್ದ ಜಿಗಣೆಗಳು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದ್ದು ಎಲ್ಲರಿಗೂ ಒಂದು ರೀತಿಯ ವಿಶೇಷ ಅನುಭವ ನೀಡಿತು. ಚಾರಣ ತಂಡದ ಸುರೇಶ್, ಸುಧಾಕರ್ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಜಿಗಣೆಯ ಕಡಿತಕ್ಕೆ ಕಡಿವಾಣ ಹಾಕಿದರು.

ಹೀಗೆ ಕಡಿದಾದ ಅರಣ್ಯ ಪ್ರದೇಶದಲ್ಲಿ ತೆರಳಿದ ಚಾರಣ ತಂಡ ಮಧ್ಯಾಹ್ನ 12 ಗಂಟೆಗೆ ನಿಶಾನಿ ಬೆಟ್ಟವನ್ನು ತಲುಪಿ ಅಲ್ಲಿಂದ ಸುತ್ತಲಿನ ಹಚ್ಚ ಹಸಿರಿನ ಗಿರಿಯ ಪ್ರದೇಶವನ್ನು, ಮಂಜಿನ ವೈಭವವನ್ನು ವೀಕ್ಷಿಸಿ ಕುಣಿದು ಕುಪ್ಪಳಿಸಿತು. ವೀಡಿಯೋ ಗ್ರಾಫಿ, ಸೆಲ್ಫಿಗಳು ಮನಸ್ಸೋ ಇಚ್ಛೆ ನಡೆಯಿತು.

ಈ ಸಂದರ್ಭ ಸುರಿದ ಜಡಿಮಳೆ ಚಾರಣ ಪ್ರಿಯರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿತು. ಮಳೆಯಲ್ಲಿ ಕುಣಿದಾಡಿದ ಚಾರಣಿಗರು ಮಳೆಯಲ್ಲೇ ಮತ್ತೆ ನಡಿಗೆ ಮುಂದುವರಿಸಿದರು. ಚಾರಣ ತಂಡ ಗಾಲ್ಫ್ ಮೈದಾನದಲ್ಲಿ ಒಂದಷ್ಟು ಸಮಯ ಕಳೆದು ದಿನವಿಡೀ ನಡೆದ ಚಾರಣದ ಬಗ್ಗೆ ಹರ್ಷವನ್ನು ಹಂಚಿಕೊಂಡಿತು. ಯೋಗ ಮತ್ತು ಪ್ರವಾಸದ ಪ್ರಯೋಗದಿಂದ ದೈಹಿಕ ಹಾಗೂ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಚಾರಣದ ನೇತೃತ್ವದ ವಹಿಸಿದ್ದ ಪ್ರಮುಖರು ಅಭಿಪ್ರಾಯಪಟ್ಟರು.