ಶ್ರೀಮಂಗಲ, ಆ. 1: ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಬೀರುಗ ಗ್ರಾಮ ಉಪ್ಪಾರರ ಶಶಿಧರ್ ಅವರ ಮನೆಯ ಸಮೀಪ ಹುಲಿ ಧಾಳಿ ಮಾಡಿ ಎರಡು ಹಸುಗಳನ್ನು ಬಲಿ ತೆಗೆದುಕೊಂಡ ಸ್ಥಳಕ್ಕೆ ಸೋಮವಾರ ರಾತ್ರಿ ಮತ್ತೆ ಹುಲಿ ಆಗಮಿಸಿರುವದು ಗೋಚರಿಸಿದೆ. ಹುಲಿ ಕೊಂದು ಹಾಕಿದ್ದ ಹಸುವನ್ನು ರಾತ್ರಿ ಬಂದು ತಿಂದಿರುವದು ಕಂಡುಬಂದಿದೆ. ಹುಲಿ ಧಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಇನ್ನೊಂದು ಹಸುವಿನ ಸ್ಥಿತಿ ಚಿಂತಾಜನಕವಾಗಿದ್ದು ಸಾವು ಬದುಕಿನ ನಡುವೆ ಒದ್ದಾಡುತ್ತಿದೆ. ಶ್ರೀಮಂಗಲ ಪಶು ವೈದ್ಯಾಧಿಕಾರಿ ಬಿ.ಜಿ. ಗಿರೀಶ್ ಅವರು ಚಿಕಿತ್ಸೆ ನೀಡುತ್ತಿದ್ದಾರೆ.

ಈ ಸಂದÀರ್ಭ ವನ್ಯಜೀವಿ ವಿಭಾಗದ ಎ.ಸಿ.ಎಫ್ ಸೀಮಾ ಅವರು ಮಾತನಾಡಿ, ಸ್ಥಳೀಯ ರೈತರು ತಮ್ಮ ಜಾನುವಾರುಗಳನ್ನು ಕೆಲವು ದಿನಗಳವರೆಗೆ ಹೊರಗೆ ಕಟ್ಟದಂತೆ ಮನವಿ ಮಾಡಿದ್ದು, ಈ ಬಗ್ಗೆ ಎಚ್ಚರ ವಹಿಸಬೇಕು. ಹುಲಿ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವ ದೆಂದು ಹೇಳಿದ್ದಾರೆ.

(ಮೊದಲ ಪುಟದಿಂದ) ಸೋಮವಾರ ರಾತ್ರಿ ಹುಲಿಯ ಓಡಾಟವನ್ನು ಖಾತರಿಪಡಿಸಿಕೊಳ್ಳಲು ಅರಣ್ಯ ಇಲಾಖೆ ಇರಿಸಿದ್ದ ಎರಡು ಕ್ಯಾಮರಾ ಟ್ರಾಪಿಗೆ ಹುಲಿ ಸೆರೆಯಾಗಿದೆ ಎಂದು ಶ್ರೀಮಂಗಲ ಆರ್.ಎಫ್.ಒ ವೀರಣ್ಣ ಮರಿಬಸಣ್ಣನವರ್ ಖಚಿತಪಡಿಸಿದ್ದಾರೆ. ಈ ಬಗ್ಗೆ ಈಗಾಗಲೆ ವನ್ಯ ಜೀವಿ ವಿಭಾಗದ ಡಿ.ಸಿ.ಎಫ್ ಜಯಾ ಅವರಿಗೆ ಈ ಬಗ್ಗೆ ವರದಿ ಸಲ್ಲಿಸಿದ್ದು, ಅನುಮತಿ ದೊರೆತ ತಕ್ಷಣ ಸ್ಥಳದಲ್ಲಿ ಬೋನು ಇರಿಸಿ ಹುಲಿ ಸೆರೆಗೆ ಕ್ರಮ ಕೈಗೊಳ್ಳಲಾಗುವದೆÀಂದು ತಿಳಿಸಿದರು.

ಶ್ರೀಮಂಗಲ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಜಿಲ್ಲಾ ರೈತ ಸಂಘದ ಸಂಚಾಲಕ ಚಿಮ್ಮಂಗಡ ಗಣೇಶ್ ಅವರ ನೇತೃತ್ವದಲ್ಲಿ ತೆರಳಿದ ಗ್ರಾಮಸ್ಥರು ಹುಲಿ ಸೆರೆಗೆ ಕೂಡಲೆ ಅಗತ್ಯ ಕ್ರಮ ಕೈಗೊಳ್ಳಬೇಕು. ಹಾಗೂ ಹಸುಗಳನ್ನು ಕಳೆದುಕೊಂಡಿರುವ ಉಪ್ಪಾರರ ಶಶಿಧರ್ ಅವರಿಗೆ ಕೂಡಲೆ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.