ಮಡಿಕೇರಿ, ಆ.3 : ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ದೇಶ ಭಕ್ತಿ ಗೀತೆಗಳ ಗಾಯನ ಸ್ಪರ್ಧೆಯನ್ನು ಆಯೋಜಿಸಿದೆ. ಸ್ಪರ್ಧೆಯಲ್ಲಿ ಕನಿಷ್ಠ 8 ಹಾಗೂ ಗರಿಷ್ಟ 15 ವಿದ್ಯಾರ್ಥಿಗಳ ತಂಡ ಪಾಲ್ಗೊಳ್ಳಬಹುದಾಗಿದೆ ಎಂದು ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಬಿ.ಕಾಳಪ್ಪ ತಿಳಿಸಿದ್ದಾರೆ. ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆಯು ತಾಲ್ಲೂಕು, ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ವೇಷ ಭೂಷಣಗಳೊಂದಿಗೆ ದೇಶಭಕ್ತಿ ಗೀತೆಯನ್ನು ಹಾಡಬೇಕೆಂದರು. ತಾಲೂಕು ಮಟ್ಟದ ಸ್ಪರ್ಧೆ ತಾ.7, ಜಿಲ್ಲಾ ಮಟ್ಟದ ಸ್ಪರ್ಧೆ ತಾ.10 ರಂದು ನಡೆದು ತಾ.15 ರೊಳಗೆ ವಿಜೇತರ ವಿವರವನ್ನು ರಾಜ್ಯ ಮಟ್ಟಕ್ಕೆ ಕಳುಹಿಸಿಕೊಡಲಾಗುತ್ತದೆ. ಆಗಸ್ಟ್ ಕೊನೆಯ ವಾರದಲ್ಲಿ ರಾಜ್ಯ ಮಟ್ಟದ ಸ್ಪರ್ಧೆ ನಡೆಯಲಿದೆ ಎಂದರು.

ಸ್ಕೌಟ್ಸ್ ಮತ್ತು ಗೈಡ್ಸ್‍ನ ರಾಜ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಅವರು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿನ ಸಂಸ್ಥೆಯ ಕಟ್ಟಡದ ಜೀರ್ಣೋದ್ಧಾರಕ್ಕೆ ಒಟ್ಟು 24 ಲಕ್ಷ ರೂ. ಅನುದಾನವನ್ನು ಒದಗಿಸಿದ್ದು, ಅದರಲ್ಲಿ 5 ಲಕ್ಷ ರೂ. ಈಗಾಗಲೆ ಬಿಡುಗಡೆಯಾಗಿದೆ. ಇದರ ನೆರವಿನಿಂದ ಸಂಸ್ಥೆಯ ಕಟ್ಟಡವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯ ಮಟ್ಟದ ಪೆರೇಡ್‍ಗೆ ಆಯ್ಕೆ

ಬೆಂಗಳೂರಿನ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ತಾ.15 ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವ ಪೆರೇಡ್‍ನಲ್ಲಿ ಪಾಲ್ಗೊಳ್ಳಲು ಕೊಡಗಿನ ನಾಲ್ವರು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಡೈಸಿ ಹೇಳಿದರು.

ಪೆರೇಡ್‍ನಲ್ಲಿ ಸ್ಕೌಟ್ಸ್ ವಿಭಾಗದಿಂದ ವೀರಾಜಪೇಟೆ ಪ್ರಗತಿ ಶಾಲೆಯ ಎಂ.ಪಿ. ರಕ್ಷಿತ್ ದೇವಯ್ಯ, ನೆಲ್ಯಹುದಿಕೇರಿ ಘಟಕದ ಧನುಷ್ ಎಸ್.ಪಿ., ಗೈಡ್ಸ್‍ನಿಂದ ಮಡಿಕೆÉೀರಿ ಸಂತ ಮೈಕೆಲರ ಶಾಲೆಯ ಶಮೊನ್ ಬೆನಿಡಿಕ್ಟ್ ಮತ್ತು ಲಿಡಿಯಾ ರೋಶ್ನಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೊಷ್ಠಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಜಿಲ್ಲಾ ಘಟಕದ ಖಜಾಂಚಿ ಎ.ಡಿ.ಸೋಮಯ್ಯ, ವೀರಾಜಪೇಟೆ ತಾಲ್ಲೂಕು ಅಧ್ಯಕ್ಷ ಎ.ವಿ. ವೆಂಕಟಪ್ಪ, ಹಾಗೂ ಮಡಿಕೆÉೀರಿ ತಾಲ್ಲೂಕು ಅಧ್ಯಕ್ಷ ಕೆ.ಎಂ. ಸುರೇಶ್ ಉಪಸ್ಥಿತರಿದ್ದರು.