ಮಡಿಕೇರಿ, ಆ.4 : ಮಡಿಕೇರಿ ನಗರ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಸ್ಥಾನವನ್ನು ನಗರಸಭಾ ಸದಸ್ಯರಿಗೆ ನೀಡುವದಕ್ಕೆ ಸದಸ್ಯ ಎಚ್.ಎಂ. ನಂದಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ದಸರಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಹಿಂದಿನಿಂದಲೂ ಬೈಲಾ ಆಧಾರದಲ್ಲೇ ನಡೆಯುತ್ತಿದೆ. ಅದರ ಪ್ರಕಾರ ಮಡಿಕೇರಿ ನಗರ ದಸರಾ ಸಮಿತಿ ಬೈಲಾ ನಿಯಮ ಮತ್ತು ನಿಬಂಧನೆಗಳು 1987 ಪುಟಸಂಖ್ಯೆ (3) ರ ಉಲ್ಲೇಖದಂತೆ ಕಾರ್ಯಾಧ್ಯಕ್ಷರನ್ನು ಸಾರ್ವಜನಿಕ ಕ್ಷೇತ್ರದಿಂದ ಆಯ್ಕೆ ಮಾಡಬೇಕು ಎಂದಿದೆ.

ದೇವಾಲಯದ ಸಾರ್ವಜನಿಕ ಕ್ಷೇತ್ರದಲ್ಲಿ ಮಾನ್ಯತೆ ಪಡೆದವರಾಗಿರಬೇಕು ಮತ್ತು ದೇವಾಲಯದ ಪ್ರತಿನಿಧಿಯಾಗಿರಬೇಕೆನ್ನುವ ನಿಯಮವಿದೆ. ನಗರಸಭಾ ಸದಸ್ಯರಿಗೆ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಕೋಶಾಧಿಕಾರಿ ಸ್ಥಾನ ಮೀಸಲಾಗಿರುತ್ತದೆ ಎಂದು ಬೈಲಾ ನಿಯಮ ಮತ್ತು ನಿಬಂಧನೆಗಳು ಪುಟ ಸಂಖ್ಯೆ 2, 3 ಮತ್ತು 4 ರಲ್ಲಿ ಉಲ್ಲೇಖಿಸಿದೆ. ಹೀಗಿದ್ದರೂ ಈ ಭಾರಿ ನಗರಸಭಾ ಸದಸ್ಯರಾದ ಕೆ.ಎಸ್ ರಮೇಶ್ ಅವರು ರಾಜಕೀಯ ದಾಳವನ್ನು ಉಪಯೋಗಿಸಿ ತಾವೇ ಕಾರ್ಯಾಧ್ಯಕ್ಷರಾಗಲು ಹೊರಟಿರುವದು ಸಮಂಜಸವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಡ ಹಬ್ಬ ದಸರಾ ಮಡಿಕೇರಿ ನಗರಸಭೆ, ಸಂಘ ಸಂಸ್ಥೆಗಳು, ಸಾರ್ವಜನಿಕರು ಮತ್ತು ಸರ್ಕಾರದ ಸಹಯೋಗದಿಂದ ಆಚರಿಸಲ್ಪಡಬೇಕೆ ಹೊರತು ನಗರಸಭಾ ಸದಸ್ಯರಿಂದ ಮಾತ್ರ ಅಲ್ಲ. ಅಲ್ಲದೆ ಸದರಿ ಕಾರ್ಯಾಧ್ಯಕ್ಷ ಆಕಾಂಕ್ಷಿ ಕೆ.ಎಸ್.ರಮೇಶ್ ಅವರು 2013-14 ರಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದು, ಆ ಸಂದರ್ಭ ನಿಯಮ ಪಾಲಿಸಿಲ್ಲ ಎಂಬ ಕಾರಣದಿಂದ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಅನುರಾಗ್ ತಿವಾರಿ ಅವರು 2014ರಲ್ಲಿ ಇಡೀ ದಸರಾ ಸಮಿತಿಯನ್ನು ಅಘೋಷಿತ ಅಮಾನತಿನಲ್ಲಿಟ್ಟು ದಸರಾವನ್ನು ಜಿಲ್ಲಾಡಳಿತದ ಮೂಲಕ ನಡೆಸಬೇಕಾಯಿತು ಎಂದು ಆರೋಪಿಸಿದ್ದಾರೆ.

ದಶಮಂಟಪ ಸಮಿತಿ, ಕರಗ ಸಮಿತಿಯ ಸದಸ್ಯರಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ದುಡಿದು, ಉತ್ತಮ ವ್ಯಕ್ತಿತ್ವ ಹೊಂದಿರುವ ದಕ್ಷ ವ್ಯಕ್ತಿಯನ್ನು ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡುವದು ಸೂಕ್ತ. ಇದು ಆಗದಿದ್ದಲ್ಲಿ ಕಳೆದ ಬಾರಿಯ ಕಾರ್ಯಾಧ್ಯಕ್ಷರನ್ನೇ ಈ ಅವಧಿಗೂ ಮುಂದುವರಿಸಿ ಬೈಲಾ ತಿದ್ದುಪಡಿ ಅಂಗೀಕಾರವಾದ ನಂತರ ಮುಂದಿನ ನಡೆಯ ಬಗ್ಗೆ ಚಿಂತನೆ ನಡೆಸುವದು ಸೂಕ್ತವೆಂದು ನಂದಕುಮಾರ್ ಅಭಿಪ್ರಾಯಪಟ್ಟಿದ್ದಾರೆ.