ಮಡಿಕೇರಿ, ಆ. 4: ದಕ್ಷಿಣ ಕೊಡಗಿನ ಬೀರುಗ ಗ್ರಾಮದಲ್ಲಿ ಜುಲೈ 31ರಂದು, ಅಲ್ಲಿನ ನಿವಾಸಿ ಶಶಿಧರ್ ಎಂಬವರ ಗದ್ದೆಯಲ್ಲಿ ಮೇಯಲು ಕಟ್ಟಿಹಾಕಿದ್ದ ಎರಡು ಹಸುಗಳನ್ನು ಬಲಿ ಪಡೆದಿರುವ ಹೆಬ್ಬುಲಿಯ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಮುಂದುವರಿಸಿದೆ.ಜು.31ರಂದು ಬೆಳಿಗ್ಗೆ ಒಂದರ ಮೇಲೊಂದರಂತೆ ಧಾಳಿ ನಡೆಸಿ ಎರಡು ಹಸುಗಳನ್ನು ಕೊಂದು ಹಾಕಿದ್ದ ಹುಲಿ, ಶಶಿಧರ್ ಅವರ ಮೂರನೆಯ ಹಸುವಿನ ಮೇಲೆ ಕೂಡ ಧಾಳಿಯೊಂದಿಗೆ ತೀವ್ರ ಗಾಯಗೊಳಿಸಿತ್ತು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆಯು, ಹೆಬ್ಬುಲಿಯನ್ನು ಸೆರೆಹಿಡಿಯಲು ಗ್ರಾಮಸ್ಥರ ಸಹಕಾರದೊಂದಿಗೆ ಬೋನು ಕೊಂಡೊಯ್ದು ಬೀರುಗದ ಘಟನೆ ಸ್ಥಳದಲ್ಲಿ ಇರಿಸಿದೆ.

ಇದುವರೆಗೆ ಹುಲಿ ಸೆರೆಯಾಗಿಲ್ಲ. ಹೀಗಾಗಿ ಅರಣ್ಯ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ. ಜಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎ. ಸೀಮ ಹಾಗೂ ಸಿಬ್ಬಂದಿ ಇಂದು ಕೂಡ ಸ್ಥಳಕ್ಕೆ ಭೇಟಿ ನೀಡಿ ಹುಲಿಯ ಚಲನವಲನ ಸಂಬಂಧ ಗ್ರಾಮಸ್ಥರಿಂದ ಮಾಹಿತಿ ಕಲೆ ಹಾಕಿದ್ದಾರೆ.