ಮೂರ್ನಾಡು, ಆ. 5: ಸೋಮವಾರ ನಿಧನರಾದ ಬಿಜೆಪಿ ಹಿರಿಯ ನಾಯಕ ಬಿ.ಬಿ. ಶಿವಪ್ಪ ಅವರಿಗೆ ಮೂರ್ನಾಡು ಬಿಜೆಪಿ ಸ್ಥಾನೀಯ ಸಮಿತಿ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು. ಇಲ್ಲಿನ ಹಿಂದೂ ಹೆಲ್ಪ್ ಲೈನ್ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶಿವಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಬಳಿಕ ಹಿರಿಯ ನಾಯಕನ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಿಸಲಾಯಿತು.

ಮೂರ್ನಾಡು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕೋಂಪುಳೀರ ಗಣೇಶ್ ಬೋಪಯ್ಯ, ಕೊಡಗು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪುದಿಯೊಕ್ಕಡ ಬೆಲ್ಲು ಸೋಮಯ್ಯ, ಆರ್‍ಎಂಸಿ ಸದಸ್ಯ ಮುಂಡಂಡ ಕುಟ್ಟಪ್ಪ ಶಿವಪ್ಪ ಅವರು ಪಕ್ಷಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಸ್ಥಾನೀಯ ಸಮಿತಿ ಕಾರ್ಯದರ್ಶಿ ಪುದಿಯೊಕ್ಕಡ ಮಧು ಕುಮಾರ್, ಉಪಾಧ್ಯಕ್ಷ ಪೊತಂಡ ಗಣಪತಿ, ಸಂಘ ಪರಿವಾರ ಪ್ರಮುಖ್ ಪುದಿಯೊಕ್ಕಡ ರಮೇಶ್ ಹಾಗೂ ಕಾರ್ಯಕರ್ತರು ಹಾಜರಿದ್ದರು.