ಸೋಮವಾರಪೇಟೆ,ಆ.8: ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಅಖಂಡ ಭಾರತ ಸಂಕಲ್ಪ ಸಪ್ತಾಹ ದಿನದ ಅಂಗವಾಗಿ ಸೋಮವಾರಪೇಟೆ ಪಟ್ಟಣದಲ್ಲಿ ಬೈಕ್ ಜಾಥಾ ನಡೆಯಿತು.

ಇಲ್ಲಿನ ಆಂಜನೇಯ ದೇವಾಲಯದಿಂದ ಹೊರಟ ಬೈಕ್ ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಒಕ್ಕಲಿಗರ ಸಮುದಾಯ ಭವನದಲ್ಲಿ ಸಮಾಪನಗೊಂಡಿತು. ಕೇಸರಿ ಧ್ವಜ ಅಳವಡಿಸಿದ್ದ ನೂರಾರು ಬೈಕ್‍ಗಳಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತೆರಳಿ ‘ಭಾರತ್ ಮಾತಾ ಕೀ ಜೈ’ ಘೋಷಣೆಗಳನ್ನು ಕೂಗಿದರು. ನಂತರ ಒಕ್ಕಲಿಗರ ಸಮುದಾಯ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಬಿಎಸ್‍ಎಫ್‍ನ ನಿವೃತ್ತ ಯೋಧ ಸಿ.ಕೆ. ರಾಜು ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ಕೃಷ್ಣ ಉಪಾಧ್ಯಾಯ ಅವರು ಅಖಂಡ ಭಾರತ ಸಂಕಲ್ಪ ದಿನದ ಬಗ್ಗೆ ಮಾತ ನಾಡಿದರು. ಹಿಂದೂ ಜಾಗರಣಾ ವೇದಿಕೆಯ ತಾಲೂಕು ಅಧ್ಯಕ್ಷ ರಮೇಶ್, ಸಂಚಾಲಕ ದರ್ಶನ್ ಜೋಯಪ್ಪ, ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಹಿಂದೂಪರ ಸಂಘಟನೆಗಳ ಮುಖಂಡರಾದ ಸುಭಾಷ್ ತಿಮ್ಮಯ್ಯ, ಸಿ.ಪಿ. ಗೋಪಾಲ್, ಮಹೇಶ್ ತಿಮ್ಮಯ್ಯ, ಉಮೇಶ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.