ಕುಶಾಲನಗರ, ಆ. 8: ಕುಶಲ ಅರ್ಚಕರ ಸಂಘದ ಆಶ್ರಯದಲ್ಲಿ ಗುರುರಾಘವೇಂದ್ರ ಭಕ್ತ ಮಹಾಶಯರ ಸಹಯೋಗದೊಂದಿಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಏರ್ಪಡಿಸಲಾಗಿತ್ತು. ಸ್ಥಳೀಯ ಗಾಯತ್ರಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರುಗೀತೆ ನಂತರ ವಿಶೇಷ ಪೂಜಾ ವಿಧಿಗಳು ಜರುಗಿದವು.

ಮಂತ್ರಪುಷ್ಪ, ಮಂಗಳಾರತಿ ನಂತರ ತೀರ್ಥಪ್ರಸಾದ ವಿನಿಯೋಗ ನೆರವೇರಿತು. ಕುಶಲ ಅರ್ಚಕರ ಸಂಘದ ಅಧ್ಯಕ್ಷ ಪರಮೇಶ್ವರ ಭಟ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ನಿವೃತ್ತ ಮುಖ್ಯೋಪಾಧ್ಯಾಯ ಕೆ.ನಂಜುಂಡಸ್ವಾಮಿ, ಉಪನ್ಯಾಸಕರು ಹಾಗೂ ಹಿರಿಯ ಪತ್ರಕರ್ತ ಬಿ.ಆರ್.ನಾರಾಯಣ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ಪ್ರತ್ಯೇಕವಾಗಿ ಪೂಜಾ ಸಂಕಲ್ಪ ನೆರವೇರಿಸಲಾಯಿತು. ಈ ಸಂದರ್ಭ ಅರ್ಚಕರ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.