ಮಡಿಕೇರಿ, ಆ. 9: ಭತ್ತ ಬೆಳೆಯಲ್ಲಿ ಯಾಂತ್ರೀಕೃತ ನಾಟಿ ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಪಡೆಯುವಂತಾಗಬೇಕು ಎಂದು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಕರೆ ನೀಡಿದ್ದಾರೆ.

ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ವತಿಯಿಂದ ಭೂಚೇತನ ಯೋಜನೆಯಡಿ ಕಗ್ಗೋಡ್ಲುವಿನ ಪ್ರಗತಿಪರ ರೈತ ಪೊಡನೋಳಂಡ ಕೆ. ಬೋಪಣ್ಣ ಮತ್ತು ಕೋದಂಡ ಬಿ. ದೇವಯ್ಯ ಅವರ ಭತ್ತದ ಗದ್ದೆಯಲ್ಲಿ ಏರ್ಪಡಿಸಲಾಗಿದ್ದ ಭತ್ತ ಬೆಳೆಯಲ್ಲಿ ಯಾಂತ್ರೀಕೃತ ನಾಟಿ ಪದ್ಧತಿಯ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲೆಯಲ್ಲಿ ಶೇ. 40 ಕ್ಕೂ ಹೆಚ್ಚು ಗದ್ದೆ ಭೂಮಿ ವಿವಿಧ ಕಾರಣಗಳಿಂದ ಪಾಳು ಬಿದ್ದಿದ್ದು, ಈ ಪ್ರದೇಶಗಳಲ್ಲಿ ಯಾಂತ್ರೀಕೃತ ನಾಟಿ ಪದ್ಧತಿ ಮೂಲಕ ಭತ್ತ ಕೃಷಿ ಮಾಡಿ, ಹೆಚ್ಚಿನ ಇಳುವರಿ ಪಡೆಯುವದರ ಜೊತೆಗೆ ಕಾರ್ಮಿಕರ ಕೊರತೆ ನೀಗಿಸುವತ್ತ ರೈತರು ಮುಂದಾಗಬೇಕಿದೆ ಎಂದು ಸಲಹೆ ಮಾಡಿದರು.

ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ಇಂದಿನ ಯುವಜನರು ಕೃಷಿಯಿಂದ ವಿಮುಖರಾಗುತ್ತಿರುವದರಿಂದ ಆಹಾರದ ಉತ್ಪಾದನೆಗಿಂತ, ಉಪಯೋಗಿಸುವದು ಹೆಚ್ಚಾಗಿದೆ. ಆದ್ದರಿಂದ ಉತ್ಪಾದನೆಯತ್ತ ಹೆಚ್ಚು ಗಮನ ಹರಿಸಬೇಕಿದೆ. ಕೃಷಿ ಕ್ಷೇತ್ರದಲ್ಲಿ ಲಾಭ ಕಂಡುಕೊಳ್ಳಲು ಕೃಷಿ ಯಾಂತ್ರೀಕರಣ ಬಳಸಿಕೊಳ್ಳುವಂತಾಗಬೇಕು, ಕೃಷಿ ಯಾಂತ್ರೀಕರಣಕ್ಕಾಗಿ ಸರ್ಕಾರ ಸಹಾಯಧನದಡಿ ಸೌಲಭ್ಯ ನೀಡಲಿದ್ದು, ಇದನ್ನು ಪಡೆದುಕೊಳ್ಳುವಂತಾಗಬೇಕು ಎಂದು ಹೇಳಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಮಾತನಾಡಿ, ಭತ್ತ ಬೆಳೆಯಲ್ಲಿ ಯಾಂತ್ರೀಕರಣ ನಾಟಿ ಪದ್ಧತಿ ಅಳವಡಿಸಿಕೊಳ್ಳುವದರಿಂದ ಸಮತೋಲನವಾಗಿ ಭತ್ತ ಬೆಳೆಯಬಹುದಾಗಿದೆ. ಕಾರ್ಮಿಕ ಕೊರತೆಯನ್ನು ನೀಗಿಸಬಹುದಾಗಿದೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದನೆ ಮಾಡಬಹುದಾಗಿದೆ ಎಂದು ಹೇಳಿದರು.

ಮಡಿಕೇರಿ ತಾಲೂಕು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ.ಸಿ. ಗಿರೀಶ್ ಮಾತನಾಡಿ, ಹೊಸ ತಾಂತ್ರಿಕತೆ ಬಳಸಿ ಯಂತ್ರದ ಮೂಲಕ ನಾಟಿ ಮಾಡುವದು ಅತ್ಯಗತ್ಯವಾಗಿದೆ. ಇದರಿಂದ ಕೃಷಿ ಕಾರ್ಮಿಕರ ಸಂಖ್ಯೆ ಮತ್ತು ಅಗತ್ಯತೆಗಳನ್ನು ಕಡಿಮೆ ಮಾಡಬಹುದಾಗಿದೆ. ಸಮಯಕ್ಕೆ ಸರಿಯಾಗಿ ಆಳ ಮತ್ತು ಅಂತರದಲ್ಲಿ ನಾಟಿ ಮಾಡಬಹುದು. ಪ್ರತೀ ಚದರ ಮೀಟರ್ ಪ್ರದೇಶದಲ್ಲಿ ಸೂಕ್ತ ಸಸ್ಯ ಸಂಖ್ಯೆಗಳನ್ನು ಕಾಪಾಡಬಹುದು. ನಾಟಿ ಮಾಡಲು ಬೇಕಾದ ಸಸಿಗಳನ್ನು ಬೆಳೆಸಲು ಕಡಿಮೆ ಜಾಗ ಸಾಕಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಕೊಡಗು ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ ಕೆಂಚರೆಡ್ಡಿ ಮಾತನಾಡಿ, ಭತ್ತದ ಗದ್ದೆಗಳನ್ನು ಪಾಳು ಬಿಡದೆ ಭತ್ತ ಕೃಷಿ ಮಾಡಬೇಕು. ಭತ್ತ ಕೃಷಿಯಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಗತಿಪರ ರೈತ ಪೊಡನೋಳಂಡ ಕೆ.ಬೋಪಣ್ಣ ಮಾತನಾಡಿ ಎರಡರಿಂದ ಮೂರು ಮಂದಿ ಕಾರ್ಮಿಕರ ಸಹಾಯದಿಂದ ಪ್ರತಿ ದಿನದಲ್ಲಿ 4 ಎಕರೆ ಭತ್ತ ನಾಟಿ ಮಾಡಬಹುದಾಗಿದೆ ಎಂದು ಹೇಳಿದರು.

ಪೊನ್ನಂಪೇಟೆ ಕೃಷಿ ವಿಸ್ತರಣಾ ಕೇಂದ್ರದ ನಿವೃತ್ತ ಪ್ರಾಧ್ಯಾಪಕ ಪೂಣಚ್ಚ ಮಾತನಾಡಿ, ಭತ್ತ ಬೆಳೆಯಲ್ಲಿ ಕೃಷಿ ಯಾಂತ್ರೀಕರಣ ಬಳಸಿಕೊಳ್ಳುವದು ಪ್ರಸ್ತುತ ದಿನದಲ್ಲಿ ಅವಶ್ಯಕವಾಗಿದೆ ಎಂದರು. ತಾ.ಪಂ. ಸದಸ್ಯೆ ರಶ್ಮಿ ಕುಮುದ, ಹಾಕತ್ತೂರು ಎಪಿಎಂಸಿ ಸದಸ್ಯೆ ನಿರ್ಮಲ ನಂಜಪ್ಪ, ರೈತರು, ಹಾಕತ್ತೂರು ಪ್ರೌಢಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಇತರರು ಭತ್ತ ಬೆಳೆಯಲ್ಲಿ ಯಾಂತ್ರೀಕೃತ ನಾಟಿ ಪದ್ಧತಿಯ ಪ್ರಾತ್ಯಕ್ಷಿಕೆ ವೀಕ್ಷಣೆ ಮಾಡಿದರು.