ಕುಶಾಲನಗರ, ಆ. 10 : ಕೊಡಗು ಜಿಲ್ಲೆಯಲ್ಲಿ ಮೈಸೂರು ಟ್ಯಾಕ್ಸಿವಾಲ ಘಟಕ ತೆರೆಯುವದಿಲ್ಲ ಎಂದು ಸಂಸ್ಥೆಯ ಪ್ರಮುಖರು ಸ್ಪಷ್ಟಪಡಿಸಿದ್ದಾರೆ. ಕುಶಾಲನಗರದಲ್ಲಿ ಸಂಸ್ಥೆಯ ಪ್ರಮುಖರು ಹಾಗೂ ಜಿಲ್ಲೆಯ ಕಾರು ಮಾಲೀಕರು, ಚಾಲಕರ ಜೊತೆ ಚರ್ಚೆ ನಡೆದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಚೇತನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಮೈಸೂರು ಟ್ಯಾಕ್ಸಿವಾಲ ಕುಶಾಲನಗರದಲ್ಲಿ ಕಛೇರಿ ತೆರೆದು ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸುವ ಬಗ್ಗೆ ಇತ್ತೀಚೆಗಷ್ಟೆ ಘೋಷಣೆ ಮಾಡಿದ್ದರು. ಜಿಲ್ಲೆಯ ಟ್ಯಾಕ್ಸಿ ಚಾಲಕರು, ಮಾಲೀಕರಿಂದ ತೀವ್ರ ವಿರೋಧ ವ್ಯಕ್ತಗೊಂಡಿದ್ದು ಇದರಿಂದ ಆತಂಕ ಉಂಟಾಗಿ ಕುಶಾಲನಗರದಲ್ಲಿ ಸಂಸ್ಥೆಯ ಪ್ರಮುಖರು ಹಾಗೂ ಜಿಲ್ಲೆಯ ಚಾಲಕ ಮಾಲೀಕರ ನಡುವೆ ವಾದ ವಿವಾದಗಳು ಕಂಡುಬಂದವು.

ನಂತರ ಸ್ಥಳೀಯ ಉದ್ಯಮಿ ಬಿ.ಆರ್. ನಾಗೇಂದ್ರಪ್ರಸಾದ್ ಅವರ ಮಧ್ಯಸ್ಥಿಕೆಯಲ್ಲಿ ವಿಷಯದ ಬಗ್ಗೆ ಚರ್ಚೆ ನಡೆದು ಟ್ಯಾಕ್ಸಿವಾಲ ಸೇವೆ ಹಿಂತೆಗೆಯುವದಾಗಿ ಚೇತನ್ ಘೋಷಣೆ ಮಾಡಿದ್ದಾರೆ.

ಈ ಸಂದರ್ಭ ಜಿಲ್ಲಾ ಕಾರು ಮಾಲೀಕರ, ಚಾಲಕರ ಸಂಘದ ಅಧ್ಯಕ್ಷ ಸಂಪತ್‍ಕುಮಾರ್, ಕಾರ್ಯದರ್ಶಿ ಕುಮಾರ್, ನಗರ ಸಂಘದ ಅಧ್ಯಕ್ಷ ವೀರೇಂದ್ರ, ಪ್ರಮುಖರಾದ ಬಿ.ಜಿ.ಆನಂದ್, ವಿಜು, ದಿನೇಶ್ ಮತ್ತಿತರರು ಇದ್ದರು.