ಗೋಣಿಕೊಪ್ಪಲು, ಆ. 10: ಬಾಳಾಜಿ ಗ್ರಾಮದಲ್ಲಿ ಸೇರಿಕೊಂಡಿದ್ದ 11 ಕಾಡಾನೆಗಳನ್ನು ಮೂರು ದಿನಗಳ ಕಾರ್ಯಾಚರಣೆಯ ನಂತರ ತಿತಿಮತಿ ರ್ಯಾಪಿಡ್ ರೆಸ್ಪಾನ್ಸ್ ಟೀಂ ಕಾರ್ಯಾಚರಣೆ ಮೂಲಕ ದೇವಮಚ್ಚಿ ಮೀಸಲು ಅರಣ್ಯಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ಮಾಯಮುಡಿ ಹಾಗೂ ಬಾಳಾಜಿ ಗ್ರಾಮದಲ್ಲಿಯೇ ಸುತ್ತಾಡುತ್ತಾ ರ್ಯಾಪಿಡ್ ರೆಸ್ಪಾನ್ಸ್ ತಂಡದ ಕಾರ್ಯಾಚರಣೆಗೆ ತೊಡಕಾಗಿದ್ದ ಆನೆಗಳನ್ನು ಹಗಲು ರಾತ್ರಿ ಕಾರ್ಯಾಚರಣೆ ನಡೆಸಿ ಕಾಡಿಗೆ ಅಟ್ಟಲಾಯಿತು. ಬಾಳಾಜಿ ಗ್ರಾಮದ ಕಾಫಿ ತೋಟದಲ್ಲಿ ಸೇರಿಕೊಂಡು ತಂಡದ ಕಾರ್ಯಾಚರಣೆಗೆ ಸ್ಪಂದಿಸದೆ ತೊಂದರೆಯಾಗಿತ್ತು. ಇದರಿಂದಾಗಿ ರ್ಯಾಪಿಡ್ ತಂಡವು

(ಮೊದಲ ಪುಟದಿಂದ) ಬೆಳಿಗ್ಗೆ ಆನೆಗಳ ಚಲನ ವಲನ ಪತ್ತೆ ಮಾಡಿ ಸಂಜೆ 5 ಗಂಟೆ ನಂತರ ಕಾಡಿಗೆ ಅಟ್ಟಲು ಯೋಜನೆ ರೂಪಿಸಿತ್ತು. ಆದರೆ, ಮಾಯಮುಡಿ, ಮೈಸೂರು ಮುಖ್ಯ ರಸ್ತೆಯನ್ನು ದಾಟಿ ಅರಣ್ಯಕ್ಕೆ ಸೇರಬೇಕಾಗಿದ್ದರಿಂದ ಆನೆಗಳು ರಸ್ತೆ ದಾಟಲು ಹಿಂಜರಿಯುತ್ತಿದ್ದವು ಪ್ರಮೀಳ ಎಂಬವರ ತೋಟದಲ್ಲಿ ಸೇರಿ ಕೊಂಡಿದ್ದವು. ಇದನ್ನು ಕಮಟೆ ಮಾರ್ಗದಲ್ಲಿ ಸಾಗಿಸಿದ ತಂಡವು ಅಂಬುಕೋಟೆ ಮೂಲಕ 3ನೇ ದಿನದ ನಂತರ ಕಾಡಿಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ.

ರಸ್ತೆ ದಾಟಲು ಹಿಂಜರಿದ ಕಾರಣ ಆನೆಗಳನ್ನು ಕಾಡಿಗೆ ಅಟ್ಟಲು ತೊಡಕುಂಟಾಯಿತು. ಒಂದು ಕಡೆ ಜನರನ್ನು ಆನೆಗಳಿಂದ ರಕ್ಷಿಸುವ ದೃಷ್ಟಿಯಿಂದ ತಂಡವು ರಾತ್ರಿ 9 ಗಂಟೆವರೆಗೂ ತೋಟಗಳಲ್ಲಿ ಆನೆಗಳ ಚಲನವಲನ ಪತ್ತೆ ಮಾಡಿ ಜನರಿಗೆ ಮಾಹಿತಿ ನೀಡುತ್ತಿದ್ದರು. ಇದರಂತೆ 1 ಮರಿ ಸೇರಿದಂತೆ 11 ಆನೆಗಳನ್ನು ಕಾಡಿಗೆ ಸೇರಿಸಲು ಯಶಸ್ವಿಯಾಗಿದೆ.

ಕಾಫಿ ತೋಟದಲ್ಲಿ ಪತ್ತೆಯಾದ 10 ಆನೆಗಳಲ್ಲಿ ಮರಿ ಇದ್ದ ಕಾರಣ ತಾಯಿ ಆನೆ ಆರ್‍ಆರ್‍ಟಿ ತಂಡ ಮೇಲೆರೆಗಲು ಮುಂದಾದ ಘಟನೆ ನಡೆಯಿತು. ಆನೆಗಳು ಗದ್ದೆಗೆ ದಾಟುವ ಸಂದರ್ಭ ತಂಡಕ್ಕೆ ಮುಖಾಮುಖಿಯಾಗಿ ಮರಿಯಾನೆಯನ್ನು ರಕ್ಷಿಸಲು ತಾಯಿ ಆನೆ ಧಾಳಿ ನಡೆಸಲು ಮುಂದಾಯಿತಾದರೂ ತಂಡವು ದೂರ ತೆರಳಿದ ಕಾರಣ ತೊಂದರೆಯಿಂದ ಪಾರಾಯಿತು. ಕಾರ್ಯಾಚರಣೆ ಸಂದರ್ಭ ಎಸಿಎಫ್ ಶ್ರೀಪತಿ, ಆರ್‍ಎಫ್‍ಒ ಅಶೋಕ್, ವನ ಪಾಲಕ ಗಣಪತಿ ಸೇರಿದಂತೆ ಆರ್‍ಆರ್‍ಟಿ ತಂಡದ ಸದಸ್ಯರುಗಳಾದ ಪೆಮ್ಮುಡಿಯಂಡ ಸಂಜು, ರಾಜು, ಸುರೇಶ್, ಮೋಹನ್, ದಿನೇಶ್ ಹಾಗೂ ಜೆ ಆರ್ ಸುರೇಶ್ ಪಾಲ್ಗೊಂಡರು.