ಮಡಿಕೇರಿ, ಆ. 10 : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಬಲವನ್ನು 12 ರಿಂದ 20ಕ್ಕೆ ಏರಿಕೆ ಮಾಡುವದರೊಂದಿಗೆ ಕೊಡಗು ಜಿಲ್ಲೆಯ ತುಳು ಭಾಷಿಕರಿಗೂ 5 ಸ್ಥಾನಗಳನ್ನು ಮೀಸಲಿಡಬೇಕೆಂದು ತುಳುವೆರ ಜನಪದ ಕೂಟದ ಜಿಲ್ಲಾ ಘಟಕ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನಪದ ಕೂಟದ ಜಿಲ್ಲಾ ಸಂಚಾಲಕ ಶ್ರೀಧರ ನೆಲ್ಲಿತ್ತಾಯ, ಕೊಡಗು ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ತುಳು ಭಾಷಿಕರಿದ್ದು, ಅಕಾಡೆಮಿಯಲ್ಲಿ 5 ಸದಸ್ಯ ಸ್ಥಾನ ನೀಡದಿದ್ದರೂ ಕನಿಷ್ಟ 2 ಸ್ಥಾನವನ್ನಾದರೂ ನೀಡಬೇಕೆಂದು ಒತ್ತಾಯಿಸಿದರು. ಕಳೆದ ಸಾಲಿನಲ್ಲಿ 10 ಸದಸ್ಯ ಬಲವಿದ್ದ ತುಳು ಸಾಹಿತ್ಯ ಅಕಾಡೆಮಿಗೆ ಈ ಬಾರಿ 2 ಸ್ಥಾನವನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಆದÀರೆ, ತುಳು ಭಾಷಿಕರು ರಾಜ್ಯದ ಎಲ್ಲಾ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವದರಿಂದ ಸದಸ್ಯ ಬಲವನ್ನು 20ಕ್ಕೆ ಏರಿಕೆ ಮಾಡಬೇಕು. ಕೊಡಗು ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ತುಳು ಮಾತನಾಡುವ 15ಕ್ಕೂ ಹೆಚ್ಚು ಜನಾಂಗಗಳಿರುವದರಿಂದ ಅಕಾಡೆಮಿಯಲ್ಲಿ ಜಿಲ್ಲೆಯವರಿಗೂ ಸ್ಥಾನ ನೀಡಬೇಕೆಂದು ನೆಲ್ಲಿತ್ತಾಯ ಒತ್ತಾಯಿಸಿದರು.

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆಯಬೇಕೆಂದರು. ಆರು ತಿಂಗಳ ಹಿಂದೆಯೇ ಕೊಡಗು ಜಿಲ್ಲೆಗೆ ಪ್ರಾತಿನಿಧ್ಯ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ನಮ್ಮ ಬೇಡಿಕೆಯನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ ಅವರು ಜನಪದ ಕೂಟದ ವತಿಯಿಂದ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು. ಇದಕ್ಕೂ ಸರ್ಕಾರ ಸ್ಪಂದಿಸದಿದ್ದಲ್ಲಿ ಕೊಡಗು ಜಿಲ್ಲೆಗೆ ಸೀಮಿತವಾಗಿ ತುಳು ಅಕಾಡೆಮಿಯನ್ನು ಸ್ಥಾಪಿಸುವದಾಗಿ ತಿಳಿಸಿದರು.

ಒಂದು ವರ್ಷದ ಹಿಂದೆ ರಚನೆಗೊಂಡ ತುಳುವೆರ ಜನಪದ ಕೂಟದಲ್ಲಿ ಸುಮಾರು 2300 ಸದಸ್ಯರಿದ್ದು, ಸದಸ್ಯತ್ವ ಅಭಿಯಾನದ ಮೂಲಕ ಈ ಸಂಖ್ಯೆಯನ್ನು 8 ಸಾವಿರಕ್ಕೆ ಏರಿಸಲಾಗುವದೆಂದು ವಿಶ್ವಾಸ ವ್ಯಕ್ತಪಡಿಸಿದರು. 13 ಹೋಬಳಿ ಘಟಕ ಹಾಗೂ ಮೂರು ತಾಲೂಕು ಘಟಕಗಳನ್ನು ಈಗಾಗಲೆ ರಚಿಸಲಾಗಿದ್ದು, ತುಳು ಭಾಷೆ, ಸಾಹಿತ್ಯ, ಸಂಸ್ಕøತಿ ಮತ್ತು ಸರ್ಕಾರದ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಕರ್ನಾಟಕ ನಾಟಕ ಅಕಾಡೆಮಿಗೆ ತುಳು ಭಾಷಿಕರಾದ ಮಂಜು ಕೊಡಗು ಹಾಗೂ ಪÀÅಸ್ತಕ ಪ್ರಾಧಿಕಾರಕ್ಕೆ ಡಾ| ಕವಿತಾ ರೈ ಅವರನ್ನು ಆಯ್ಕೆ ಮಾಡಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸುವದಾಗಿ ಶ್ರೀಧರ ನೆಲ್ಲಿತ್ತಾಯ ಇದೇ ಸಂದರ್ಭ ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ ಮಾತನಾಡಿ, ಅಕಾಡೆಮಿಗೆ ಜನಪ್ರತಿನಿಧಿಗಳ ಶಿಫಾರಸ್ಸಿನ ಮೇರೆ ಸದಸ್ಯರನ್ನು ಆಯ್ಕೆ ಮಾಡದೆ, ತುಳು ಭಾಷೆ, ಸಂಸ್ಕøತಿಯ ಬಗ್ಗೆ ಹೆಚ್ಚು ಕಾಳಜಿ ಹೊಂದಿ ಅದರಲ್ಲಿ ತೊಡಗಿಸಿಕೊಂಡಿರುವವರನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸಿದರು. ತುಳು ಸಾಹಿತ್ಯ ಅಕಾಡೆಮಿಗೆ ಕೇವಲ ದಕ್ಷಿಣ ಕನ್ನಡ ಜಿಲ್ಲೆಯಿಂದ ಮಾತ್ರ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ನೇಮಕ ಮಾಡಿ ಆದೇಶ ಹೊರಡಿಸುವದು ಸರಿಯಾದ ಕ್ರಮವಲ್ಲವೆಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಶೇಖರ್ ಭಂಡಾರಿ, ಉಪಾಧ್ಯಕ್ಷ ಆನಂದ ರಘು, ಬಿ.ಡಿ. ನಾರಾಯಣ ರೈ ಹಾಗೂ ಸಲಹೆಗಾರರಾದ ಎಂ.ಬಿ. ನಾಣಯ್ಯ ಉಪಸ್ಥಿತರಿದ್ದರು.