ಮಡಿಕೇರಿ, ಆ. 11: ಕೊಡವರ ಆದಿ ಕವಿ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯ 150ನೇ ಜನ್ಮೋತ್ಸವ ವನ್ನು ವರ್ಷವಿಡೀ ಆಚರಿಸಲು ಅಖಿಲ ಕೊಡವ ಸಮಾಜ ತೀರ್ಮಾನಿಸಿದೆ.

ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ವೀರಾಜಪೇಟೆಯ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ವಿವಿಧ ಕೊಡವ ಸಮಾಜದ ಪ್ರತಿನಿಧಿಗಳು ಹಾಗೂ ಪ್ರಮುಖರ ಸಭೆಯಲ್ಲಿ ವರ್ಷವಿಡೀ ಅಪ್ಪಚ್ಚ ಕವಿಯನ್ನು ನೆನಪು ಮಾಡಿಕೊಳ್ಳುವಂತಹ ಕಾರ್ಯಕ್ರಮ ವನ್ನು ನಡೆಸಲು ನಿರ್ಧಾರ ತೆಗೆದುಕೊಳ್ಳಲಾಯಿತು. ಸೆಪ್ಟಂಬರ್ ತಿಂಗಳಿನಲ್ಲಿ ಅಪ್ಪಚ್ಚ ಕವಿಯ ಜನ್ಮೋತ್ಸವ ವನ್ನು ಉದ್ಘಾಟಿಸಲಾಗುವದು. ನಂತರ ಪ್ರತಿ ತಿಂಗಳು ಒಂದೊಂದು ಪ್ರದೇಶದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗುವದು. ಈ ಕುರಿತು ತಾತ್ಕಾಲಿಕವಾಗಿ “ಅಪ್ಪಚ್ಚ ಕವಿ 150ನೇ ಜನ್ಮೋತ್ಸವ” ಸಂಚಾಲಕ ಸಮಿತಿಯೊಂದನ್ನು ರಚಿಸಲಾಯಿತು. ತಾ. 22 ರಂದು ವೀರಾಜಪೇಟೆಯಲ್ಲಿ ಮತ್ತೊಮ್ಮೆ ಎಲ್ಲಾ ಕೊಡವ ಸಮಾಜ, ಕೊಡವ ಸಮಾಜಗಳ ಒಕ್ಕೂಟ ಪ್ರತಿನಿಧಿಗಳ ಸಭೆ ನಡೆಸಲಾಗುವದು. ಕಾರ್ಯಕ್ರಮಗಳ ವಿವರವನ್ನು ಚರ್ಚಿಸಿ ಅಂತಿಮಗೊಳಿಸಲಾಗುವದು ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ತಿಳಿಸಿದ್ದಾರೆ.

ಸಭೆಯಲ್ಲಿ ಅಖಿಲ ಕೊಡವ ಸಮಾಜದ ಖಜಾಂಚಿ ಮಂಡೇಪಂಡ ಸುಗುಣ, ಕಾರ್ಯದರ್ಶಿ ಅಮ್ಮಣಿಚಂಡ ರಾಜಾ ನಂಜಪ್ಪ, ಕೊಡವ ಸಮಾಜದ ಪ್ರತಿನಿಗಳು ಹಾಗೂ ಸಾಹಿತಿಗಳು ಉಪಸ್ಥಿತರಿದ್ದರು.