ಸುಂಟಿಕೊಪ್ಪ, ಆ. 12 : ಇಲ್ಲಿಗೆ ಸಮೀಪದ ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಡಿಕಾಡು ತೋಟಕ್ಕೆ ಕಾಡಾನೆಗಳು ಬಂದು ಗ್ರಾಮದ ಕಾಫಿ ತೋಟಗಳಲ್ಲಿ ಸುತ್ತಾಡಿಕೊಂಡಿದ್ದು ಕೃಷಿಕರು ಆತಂಕದಿಂದ ದಿನ ದೂಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಕಂಬಿಬಾಣೆ ಗ್ರಾಮದಲ್ಲಿ ರಾತ್ರಿ ವೇಳೆ ಹರೀಶ್ ಪ್ಯೆ ಅವರ ತೋಟದೊಳಗೆ ಕಾಡಾನೆಗಳು ನುಗ್ಗಿ ಮನೆ ಅಂಗಳದಲ್ಲಿ ನಿಲ್ಲಿಸಿದ್ದ ಕಾರಿಗೆ ಕೋರೆಯಿಂದ ತಿವಿದು ಹಾನಿ ಗೊಳಿಸಿದಲ್ಲದೆ ಪಕ್ಕದಲ್ಲಿದ್ದ ನೀರಿನ ಟ್ಯಾಂಕನ್ನು ಕಾಲಿನಿಂದ ತುಳಿದು ಕೋರೆಯಿಂದ ತಿವಿದು ಕಾಫಿ ತೋಟದೊಳಗೆ ನುಗ್ಗಿ ಕಾಫಿ, ತೆಂಗು, ಕರಿಮೆಣಸು, ಬಾಳೆ, ಸಪೋಟ, ಗಿಡಗಳನ್ನು ನಾಶ ಗೊಳಿಸಿದೆ. ಸುಮಾರು ರೂ. 50 ಸಾವಿರ ನಷ್ಟ ಸಂಭವಿಸಿದೆ ಎಂದು ಚೌಡಿಕಾಡು ತೋಟದ ಮಾಲಿಕ ಹರೀಶ್ ಪ್ಯೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ಭಾಗದಲ್ಲಿ ಹೆಚ್ಚಿನ ರ್ಯೆತರು ಕೃಷಿಯನ್ನೆ ಅವಲಂಭಿತರಾಗಿದ್ದು, ವರ್ಷವಿಡಿ ಶ್ರಮವಹಿಸಿ ದುಡಿದು ಕೃಷಿ ಫಸÀಲು ಕೈ ಸೇರಬೇಕೆನ್ನುವ ಸಂದರ್ಭ ಆನೆಗಳು ನಾಶಗೊಳಿಸಿದೆ. ಈ ಭಾಗದ ನಿವಾಸಿಗಳು ರಾತ್ರಿಯಿಡಿ ಜೀವಭಯದಿಂದ ಕಾಲ ಕಳೆದು ಕೆಲಸಕ್ಕೆ ಹೋಗದೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯ ಪಡುತ್ತಿದ್ದಾರೆ. ಕಾಡಿನಿಂದ ಆನೆಗಳು ಗ್ರಾಮಕ್ಕೆ ಬರದಂತೆ ಸರಿಯಾದ ಕಂದಕ ನಿರ್ಮಿಸಬೇಕು ಎಂದು ಈ ಭಾಗದ ರೈತರು ಒತ್ತಾಯಿಸಿದ್ದಾರೆ