ಮಡಿಕೇರಿ, ಆ. 12 : ದೇಶದ ಜನರಿಗೆ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಯನ್ನು ನೀಡುವ ನಿರ್ಧಾರಗಳನ್ನು ಕೈಗೊಳ್ಳುತ್ತಲೇ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ವನ್ನು ತಡೆಗಟ್ಟುವದಕ್ಕಾಗಿ ಹಳೆಯ ನೋಟುಗಳ ಚಲಾವಣೆಯನ್ನು ರದ್ದು ಮಾಡುತ್ತಿರುವದಾಗಿ ಕೇಂದ್ರ ಸರಕಾರ ಹೇಳಿಕೊಂಡಿತ್ತು. ಆದರೆ ಇಂದು ಭ್ರಷ್ಟಾಚಾರ ನಿಂತಿದೆಯೇ ಎಂದು ಪ್ರಶ್ನಿಸಿದರು. ಭಾರತೀಯ ಸೇನೆಯ ಅಧಿಕಾರಿಗಳಿಗೆ ನೀಡಲಾಗುತ್ತಿದ್ದ ಪಡಿತರವನ್ನು ಸ್ಥಗಿತಗೊಳಿಸಲಾಗಿದ್ದು, ಇದಕ್ಕೂ ಭ್ರಷ್ಟಾಚಾರ ನಿಯಂತ್ರಣದ ಸಮರ್ಥನೆಯನ್ನು ಸರಕಾರ ನೀಡುತ್ತಿದೆ. ಪಡಿತರಕ್ಕೆ ಬದಲಾಗಿ ರೂ.3 ಸಾವಿರ ನಗದನ್ನು ನೀಡುವದಾಗಿ ಹೇಳಲಾಗುತ್ತಿದೆ ಯಾದರೂ ತೆರಿಗೆ ಕಡಿತಗೊಂಡು ಸೇನಾಧಿಕಾರಿಗಳಿಗೆ ಕೇವಲ ರೂ.1900 ಮಾತ್ರ ದೊರೆಯುತ್ತದೆ. ಪಡಿತರ ಖರೀದಿಗೆ ಈ ಅಲ್ಪ ಪ್ರಮಾಣದ ಹಣ ಸಾಕೇ ಎಂದು ಪ್ರಶ್ನಿಸಿದ ಬ್ರಿಜೇಶ್ ಕಾಳಪ್ಪ, ದೇಶವನ್ನು ಕಾಯುವ ಸೈನಿಕರು ಯಾವದೇ ಸಂದರ್ಭದಲ್ಲೂ ಹಸಿವಿನಿಂದ ಬಳಲಬಾರದು ಎನ್ನುವ ಕಾರಣಕ್ಕಾಗಿ ಅರಸರ ಕಾಲದಿಂದಲೂ ನೀಡಲಾಗುತ್ತಿದ್ದ ಪಡಿತರ ವ್ಯವಸ್ಥೆಯನ್ನು ದಿಢೀರ್ ಆಗಿ ಸ್ಥಗಿತಗೊಳಿಸಿರುವದನ್ನು ಗಮನಿಸಿದರೆ ದೇಶದಲ್ಲಿ ತುಘಲಕ್ ಆಡಳಿತ ನಡೆಯುತ್ತಿರುವದು ಖಾತ್ರಿಯಾಗುತ್ತದೆ ಎಂದು ಆರೋಪಿಸಿದರು.

ಕೇಂದ್ರ ಸರಕಾರ ತನ್ನ ನಿರ್ಧಾರವನ್ನು ಹಿಂದಕ್ಕೆ ಪಡೆದು ಸೇನಾಧಿಕಾರಿಗಳಿಗೆ ಈ ಹಿಂದಿನಂತೆ ಪಡಿತರವನ್ನು ನೀಡಬೇಕೆಂದು ಒತ್ತಾಯಿಸಿದರು.

ಉತ್ತರಪ್ರದೇಶದ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಮೂವತ್ತಕ್ಕೂ ಅಧಿಕ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿ ಹಸುಗಳಿಗೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ, ಆದರೆ ಮಾನವನ ಜೀವಕ್ಕೆ ಬೆಲೆ ಇಲ್ಲದಾಗಿದೆ. ಕೇಂದ್ರ ಸರಕಾರ ಗೋರಕ್ಷಣೆಯ ಮಾತನಾಡುತ್ತದೆ, ಆದರೆ ರಸ್ತೆ ಬದಿಯಲ್ಲಿ ಅದೆಷ್ಟೋ ಹಸುಗಳು ಪ್ಲಾಸ್ಟಿಕ್ ತ್ಯಾಜ್ಯ ತಿಂದು ಮೃತಪಡುತ್ತಿರುವ ಬಗ್ಗೆ ಯಾವದೇ ಆತಂಕ ವ್ಯಕ್ತಪಡಿಸುತ್ತಿಲ್ಲವೆಂದು ಬ್ರಿಜೇಶ್ ಕಾಳಪ್ಪ ಟೀಕಿಸಿದರು.

ಕೇಂದ್ರದ ರಕ್ಷಣಾ ಸಚಿವರು ಕೇರಳದಲ್ಲಿ ಮೃತಪಟ್ಟ ಆರ್‍ಎಸ್‍ಎಸ್ ಕಾರ್ಯಕರ್ತನ ಮನೆ ಭೇಟಿ ನೀಡುತ್ತಾರೆ. ಆದರೆ ವಿಮಾನ ದುರಂತ ದಲ್ಲಿ ಮೃತಪಟ್ಟ ಸೇನಾಧಿಕಾರಿಯ ಮನೆಗೆ ಭೇಟಿ ನೀಡದೆ ಮರಳುತ್ತಾರೆ. ಇದು ಯಾವ ರೀತಿಯ ರಾಜಕಾರಣವೆಂದು ಪ್ರಶ್ನಿಸಿದ ಅವರು ಗುಜರಾತ್‍ನಲ್ಲಿ ನಡೆದ ರಾಜ್ಯಸಭಾ ಚುನಾವಣೆ ಸಂದರ್ಭ ಬಿಜೆಪಿ ತಲಾ 20 ಕೋಟಿ ರೂ. ಆಮಿಷವೊಡ್ಡಿ ಶಾಸಕರುಗಳನ್ನು ಖರೀದಿ ಮಾಡಲು ಯತ್ನಿಸಿತ್ತು ಎಂದು ಆರೋಪಿಸಿದರು.

ಗುಜರಾತ್ ಶಾಸಕರು ಕರ್ನಾಟಕಕ್ಕೆ ಆಗಮಿಸಿದ್ದ ಸಂದರ್ಭ ದಲ್ಲೇ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ಆಸ್ತಿಗಳ ಮೇಲೆ ಐಟಿ ದಾಳಿ ನಡೆಯಿತು. ಆದರೆ ಇಷ್ಟು ದಿನಗಳಾದರೂ ಎಷ್ಟು ಪ್ರಮಾಣದ ಹಣ ಪತ್ತೆಯಾಗಿದೆ ಎಂದು ಐಟಿ ಬಹಿರಂಗ ಪಡಿಸಿಲ್ಲ. ಈ ದಾಳಿಯ ಹಿಂದೆ ಹುನ್ನಾರವಿದ್ದು, ಹಣ ಸಂಗ್ರಹದ ಬಗ್ಗೆ ಗಾಳಿ ಸುದ್ದಿಗಳು ಹರಡಲಿ ಎನ್ನುವ ಕಾರಣಕ್ಕಾಗಿ “ರೂಮರ್ಸ್ ಸ್ಪ್ರೆಡಿಂಗ್ ಸೊಸೈಟಿ” ವರ್ಗ ಷಡ್ಯಂತ್ರ ನಡೆಸಿದೆ. ಐಟಿ, ಇಡಿ, ಸಿಆರ್‍ಪಿಎಫ್ ವ್ಯವಸ್ಥೆಯನ್ನು ಕೇಂದ್ರ ಸರಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಬ್ರಿಜೇಶ್ ಕಾಳಪ್ಪ ಆರೋಪಿಸಿದರು.

ಕರ್ನಾಟಕದಲ್ಲಿ ನಿರಂತರವಾಗಿ ಬರದ ಪರಿಸ್ಥಿತಿ ಇರುವ ಬಗ್ಗೆ ಸುಪ್ರಿಂಕೋರ್ಟ್‍ಗೆ ಮನವರಿಕೆ ಯಾಗಿದ್ದು, ಕಾವೇರಿ ನೀರಿನ ವಿವಾದದ ತೀರ್ಪು ಕರ್ನಾಟಕದ ಪರವಾಗಲಿದೆ ಎಂದು ಬ್ರಿಜೇಶ್ ಕಾಳಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಮೆಹರೋಜ್ó ಖಾನ್, ಕೆ.ಕೆ. ಮಂಜುನಾಥ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಾನೆಹಿತ್ಲು ಮೊಣ್ಣಪ್ಪ, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶಾಫಿ ಕೊಟ್ಟಮುಡಿ ಹಾಗೂ ನಂದಿನೆರವಂಡ ಮಧು ಉಪಸ್ಥಿತರಿದ್ದರು.