*ಗೋಣಿಕೊಪ್ಪಲು, ಆ. 12: ಉದಯೋನ್ಮುಖ ಬರಹಗಾರರಿಂದ ಸಾಮಾಜ ಕಟ್ಟುವಂತಹ ಸಾಹಿತ್ಯ ಸೃಷ್ಟಿಯಾಗಲಿ ಎಂದು ಕಾವೇರಿ ಎಜುಕೇಷನ್ ಅಧ್ಯಕ್ಷ ಡಾ. ಅಜ್ಜಿನಿಕಂಡ ಗಣಪತಿ ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕಾವೇರಿ ಎಜುಕೇಷನ್ ಸೊಸೈಟಿ ಆಶ್ರಯದಲ್ಲಿ ಕಾವೇರಿ ಕಾಲೇಜು ಸಭಾಂಗಣದಲ್ಲಿ ನಡೆದ ಮುಂಗಾರು ಕವಿಗೋಷ್ಠಿ ಮತ್ತು ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದ ಬೆಳವಣಿಗೆಗೆ ಸಾಹಿತ್ಯ ಅಮೂಲ್ಯವಾದದ್ದು. ಉತ್ತಮ ವಿಚಾರಗಳನ್ನೊಳಗೊಂಡ ಸಾಹಿತ್ಯಗಳ ಸೃಷ್ಟಿಯಾಗಬೇಕಾಗಿದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಸಾಹಿತ್ಯದ ಒಲವು ಮೂಡಿಸಿಕೊಳ್ಳಬೇಕು ಎಂದು ಹೇಳಿದರು.

ಸಾಹಿತಿ ಪ್ರೊ. ದಂಬೆಕೋಡಿ ಸುಶಿಲಾ ಸುಬ್ರಮಣಿ ಮಾತನಾಡಿ, ಧರ್ಮಗಳ ಅವಹೇಳನ, ಮಾಂಸ ಭಕ್ಷಣೆ ವಿಚಾರಗಳ ಸಾಹಿತ್ಯಗಳು ಸೃಷ್ಟಿಯಾಗುವದರಿಂದ ಸಮಾಜಕ್ಕೆ ಒಳಿತಾಗುವದಿಲ್ಲ. ಉತ್ತಮ ಸಾಹಿತ್ಯ, ಜೀವನವನ್ನು ಗಟ್ಟಿಗೊಳಿಸುತ್ತದೆ. ಸಮಾಜವನ್ನು ಕಟ್ಟಲು ಸಾಹಿತ್ಯದಿಂದ ಸಾಧ್ಯ. ಸಾಹಿತ್ಯದಿಂದ ಧರ್ಮ, ಜಾತಿಯನ್ನು ಅಳೆದು ಸಮಾಜವನ್ನು ಒಡೆದು ಆಳುವ ನೀತಿ ಬದಲಾಗಬೇಕಾಗಿದೆ. ಸಮಾಜವನ್ನು ಪರಿವರ್ತನೆ ಮಾಡುವ ಬರಹಗಳು ಸೃಷ್ಟಿಯಾಗಬೇಕು. ಸಾಹಿತ್ಯದಿಂದ ಮನುಷ್ಯನ ನಡುವಿನಲ್ಲಿ ಬಾಂಧವ್ಯ ಬೆಳೆಯಲು ಸಾಧ್ಯವಿದೆ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೊಕೇಶ್ ಸಾಗರ್ ಮಾತನಾಡಿ, ಆದ್ಯಾತ್ಮ ಮತ್ತು ಸಾಹಿತ್ಯದಿಂದ ಬದುಕಿನಲ್ಲಿ ಉತ್ತಮ ದಾರಿ ಕಂಡುಕೊಳ್ಳಲು ಸಾಧÀ್ಯವಿದೆ. ಸಮಾಜವನ್ನು ಸರಿದಾರಿಗೆ ತರಲು ಸಾಹಿತ್ಯದಿಂದ ಸಾಧÀ್ಯ ಎಂದು ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮುಲ್ಲೇಂಗಡ ಮಧೋಷ್ ಪೂವಯ್ಯ ಮಾತನಾಡಿ, ವಿದ್ಯಾರ್ಥಿಗಳು ಸಾಹಿತ್ಯದ ಬಗ್ಗೆ ಹೆಚ್ಚಿನ ಒಲವು ಹೊಂದಿರಬೇಕು. ಪುಸ್ತಕಗಳ ಓದಿನಿಂದ ಏಕಾಗ್ರತೆ ಹೆಚ್ಚಾಗುತ್ತದೆ. ಉತ್ತಮ ವಿಚಾರಗಳು ಮಸ್ತಕಕ್ಕೆ ತುಂಬುತ್ತವೆ ಎಂದು ಹೇಳಿದರು.

ಶ್ರೀಮಂಗಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಮಾತನಾಡಿ, ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕಾದರೆ ಸಂಸ್ಕಾರ ವಂತರಾಗಬೇಕು. ಸಾಹಿತ್ಯಾಸಕ್ತಿಯಿಂದ ಸಂಸ್ಕಾರ ಬೆಳೆಸಿಕೊಳ್ಳಬಹುದು ಎಂದರು. ಚುಟುಕು ಸಾಹಿತಿ ಕೇಚಮಾಡ ಸುಬ್ಬಮ್ಮ ತಿಮ್ಮಯ್ಯ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಬೆಳೆಯಲು ಮತ್ತು ಶಿಸ್ತನ್ನು ಬೆಳೆಸಿಕೊಳ್ಳಲು ಪುಸ್ತಕಗಳ ಸ್ನೇಹ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸಾಹಿತಿ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ಮಾತನಾಡಿ, ಬದುಕಿನಲ್ಲಿ ಬಾಂಧವ್ಯ ಬೆಳೆಯಲು ಸಾಹಿತ್ಯಪರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಸಾಹಿತಿ ಅಜ್ಜಿನಿಕಂಡ ಟಿ. ಬೀಮಯ್ಯ ಮಾತನಾಡಿ, ಹುಬ್ಬಳ್ಳಿ ಹುಲಿ ಚಕ್ಕೇರ ಮೊಣ್ಣಯ್ಯ ಅವರಂತಹ ಅಪ್ರತಿಮ ದೇಶಪ್ರೇಮಿಯ ಜೀವನ ಚರಿತ್ರೆಯನ್ನು ಹೊರತರುವದರಿಂದ ಓದುಗರಲ್ಲಿ ದೇಶಭಕ್ತಿ ಹೆಚ್ಚುತ್ತದೆ. ಈ ದೃಷ್ಟಿಯಿಂದ ಅವರ ಜೀವನ ಚರಿತ್ರೆಯನ್ನು ಮರುಮುದ್ರಣ ಗೊಳಿಸಲಾಗಿದೆ ಎಂದು ತಿಳಿಸಿದರು.

ಕವಿಗೋಷ್ಠಿ: ಕವಿಗಳಾದ ಮೊಣ್ಣಂಡ ಶೋಭಾ ಸುಬ್ಬಯ್ಯ, ವಾತ್ಸಲ್ಯ, ನಳಿನಾಕ್ಷಿ, ಮಾಲಾಮೂರ್ತಿ, ಕಾಯಪಂಡ ಟಾಟಾ ಚಂಗಪ್ಪ, ಜಗದೀಶ್ ಜೋಡುಬೀಟಿ, ನಲ, ವಿಜಯ, ಚಮ್ಮಟ್ಟಿರ ಪ್ರವೀಣ್, ಮಂಜುನಾಥ್, ರಾಚು ಶ್ಯಾಂ, ಮೂಡಗದ್ದೆ ವಿನೋದ್, ಟೋಮಿ ಥಾಮಸ್, ಮುಲ್ಲೇಂಗಡ ರೇವತಿ ಪೂವಯ್ಯ, ಪುಷ್ಪಲತಾ ಶಿವಪ್ಪ, ಚೆಟ್ಟಂಗಡ ರವಿ ಸುಬ್ಬಯ್ಯ, ಸುದರ್ಶನ್ ಕೆ.ಪಿ. ಗಣೇಶ್ ನಾಯ್ಡು, ಪುಟ್ಟಣಾಚಾರ್, ರಾಣಿ ರವೀಂದ್ರ, ಮಧೋಷ್ ಪೂವಯ್ಯ, ವೈಲೇಶ್, ಕೌಶಲ್ಯ, ಬಿ.ಎಂ. ಅರ್ಚನಾ, ಎಂ.ಎನ್. ಕೀರ್ತನಾ, ಎನ್.ಜಿ.ಗಗನ್, ಎನ್.ಎನ್. ತಿಮ್ಮಯ್ಯ, ಮುತ್ತಮ್ಮ, ಹೆಚ್.ಎಸ್.ಶಾಲಿನಿ, ವಿನೋದ್ ಪೊನ್ನಂಪೇಟೆ ಮತ್ತು ಗಿರೀಶ್ ಕಿಗ್ಗಾಲು ಇವರ ಕವನಗಳು ಗಮನ ಸೆಳೆದವು.

ಪುಸ್ತಕ ಬಿಡುಗಡೆ: ಸಾಹಿತಿ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ಅವರ ‘ನಿರೀಕ್ಷೆ’ ಕಥಾ ಸಂಕಲನ, ಚುಟುಕು ರತ್ನ ಕೇಚಮಾಡ ಸುಬ್ಬಮ್ಮ ತಿಮ್ಮಯ್ಯ ಅವರ ‘ಭಾವನೆಯಲ್ಲರಳಿದ ಪುಷ್ಪದೆಸಳುಗಳು’, ‘ಚುಟುಕಿನ ಸವಿಗುಟುಕು’, ಅಜ್ಜಿನಿಕಂಡ ಭೀಮಯ್ಯ ಅವರ ‘ಹುಬ್ಬಳ್ಳಿ ಹುಲಿ ಚಕ್ಕೇರ ಮೊಣ್ಣಯ್ಯ ಅವರ ಜೀವನ ಚರಿತ್ರೆ’ ಪುಸ್ತಕ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ 7ನೇ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆ ಕಾವೇರಿ ಐಸಿರಿ ಹಾಗೂ ಕಾವೇರಿ ಪದವಿ ಕಾಲೇಜಿನ ಕಾವೇರಿ ಸಂಚಿಕೆಯನ್ನು ಬಿಡುಗಡೆ ಗೊಳಿಸಲಾಯಿತು.

ಕ.ಸಾ.ಪ. ಪೊನ್ನಂಪೇಟೆ ಹೋಬಳಿ ಘಟಕ ಅಧ್ಯಕ್ಷ ಡಾ. ಚಂದ್ರಶೇಖರ್, ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಪಟ್ಟಡ ಪೂವಣ್ಣ , ಕ.ಸಾ.ಪ ಜಿಲ್ಲಾ ನಿರ್ದೇಶಕ ಬಾಲಕೃಷ್ಣ ರೈ ಉಪಸ್ಥಿತರಿದ್ದರು.