ವೀರಾಜಪೇಟೆ, ಆ. 15: ಸುಭದ್ರ ಐತಿಹಾಸಿಕ ಇತಿಹಾಸ ಹೊಂದಿರುವ ಭಾರತದÀ ಸಂಸ್ಕøತಿಯ ಜೀವ ಮತ್ತು ಪ್ರಕೃತಿಗಳ ನಡುವಿನ ಪ್ರಬಲ ನಂಟನ್ನು ಅರಿಯುವಲ್ಲಿ ವಿದೇಶಗಳು ವಿಫಲವಾಗಿದೆ ಎಂದು ವೀರಾಜಪೇಟೆ ತಹಶೀಲ್ದಾರ್ ಗೋವಿಂದರಾಜ್ ಹೇಳಿದರು.ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಆಡಳಿತದ ವತಿಯಿಂದ ತಾಲೂಕು ಮೈದಾನದಲ್ಲಿ ಹಮ್ಮಿಕೊಂಡಿದ್ದ 71ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ಮಾಡಿ, ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದ ಗೋವಿಂದರಾಜ್ ಅವರು, ಮಿಲಿಟರಿ ಶಕ್ತಿಯನ್ನು ಬಳಸಿ ದಬ್ಬಾಳಿಕೆಯಿಂದ ಭಾರತವನ್ನು ಆಳಬಹುದು ಎಂಬ ವಿದೇಶಿಯರ ನಂಬಿಕೆ ಹುಸಿಯಾಯಿತು. ಭಾರತದ ಹಿರಿಯ ನಾಯಕರುಗಳ ನಿರಂತರ ಅನೇಕ ಚಳುವಳಿಗಳು ಬಿಟೀಷರನ್ನು ಭಾರತದಿಂದ ಕಾಲ್ತೆಗೆಯುವಂತೆ ಮಾಡಿತು. ಸ್ವಾತಂತ್ರ್ಯ ಹೋರಾಟದಲ್ಲಿ ದೇಶಕ್ಕಾಗಿ ಮಡಿದ ಹುತಾತ್ಮರನ್ನು ಸ್ಮರಿಸಿಕೊಳ್ಳುವದು ಭಾರತೀಯರಾದ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಎಂ. ದಿನೇಶ್ ಮಾತನಾಡಿ, ಪರಸ್ಪರ ಬಾಂಧವ್ಯ, ಪರಸ್ಪರ ಐಕ್ಯತೆ ಮನುಷ್ಯನ ಘನತೆಯನ್ನು ಹೆಚ್ಚಿಸುತ್ತದೆ. ಪರಸ್ಪರ ಭಿನ್ನತೆಯಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿದರು.

(ಮೊದಲ ಪುಟದಿಂದ) ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಮಾತನಾಡಿದರು. ಉಪಾಧ್ಯಕ್ಷ ನೆಲ್ಲಿರ ಚಲನ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ತಸ್ಲಿಂ ಅಕ್ತರ್, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ, ಡಿವೈಎಸ್‍ಪಿ ನಾಗಪ್ಪ, ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ, ಮಾಜಿ ಸೈನಿಕರ ಸಂಘದ ಚೇಂದ್ರಿಮಾಡ ಗಣೇಶ್ ನಂಜಪ್ಪ, ಚೇಂಬರ್ ಆಫ್ ಕಾಮರ್ಸ್‍ನ ಸ್ಥಾನೀಯ ಸಮಿತಿ ಅಧ್ಯಕ್ಷ ಎಂ.ಪಿ. ಕಾಶಿ ಕಾವೇರಪ್ಪ, ಮಧೋಶ್ ಪೂವಯ್ಯ ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸ್ವಾಗತಿಸಿದರು. ಶಿಕ್ಷಕ ಚಾಲ್ರ್ಸ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಬಿ.ಎಸ್. ದೇವರ್ ವಂದಿಸಿದರು. ತಾಲೂಕಿನ ವಿವಿಧ ಶಾಲಾ ಮಕ್ಕಳಿಂದ ಸ್ತಬ್ದ ಚಿತ್ರಗಳ ಪ್ರದರ್ಶನ ನಡೆಯಿತು.

ಸರ್ಕಾರಿ ಶಾಲೆಯಲ್ಲಿ ಓದಿ ಎಸ್‍ಎಸ್‍ಎಲ್‍ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕೊಂಡಂಗೇರಿ ಶಾಲೆಯ ಕೆ.ವೈ ಶರ್ಮಿಳಾ, ಮಾಲ್ದಾರೆ ಶಾಲೆಯ ಎ ಸಮೀನಾ, ಪೊನ್ನಂಪೇಟೆಯ ಹೆಚ್,ಎಲ್ ಆಕಾಶ್, ಶ್ರೇಯಸ್ ಸೋಮಯ್ಯ ಅವರುಗಳಿಗೆ ಲ್ಯಾಪ್‍ಟಾಪ್ ನೀಡಿ ಗೌರವಿಸಲಾಯಿತು.

ಸ್ತಬ್ದಚಿತ್ರ ಪ್ರದರ್ಶನದಲ್ಲಿ ಶ್ರೀಮಂಗಲ ಜೆ.ಸಿ. ಶಾಲೆಯ ಬ್ರಮೋಸ್ ಕ್ಷಿಪಣಿ ಸ್ತಬ್ದ ಚಿತ್ರಕ್ಕೆ ಪ್ರಥಮ, ವಿವಿಧತೆಯಲ್ಲಿ ಏಕತೆ ಬಿಂಬಿಸುವ ಸ್ತಬ್ದ ಚಿತ್ರ ಮಾಡಿದ್ದ ಗೋಣಿಕೊಪ್ಪದ ಸರ್ಕಾರಿ ಶಾಲೆ ದ್ವಿತೀಯ, ವೀರಾಜಪೇಟೆ ಪ್ರಗತಿ ಶಾಲೆಯ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಅಗ್ನಿ 3 ಕ್ಷಿಪಣಿ ತೃತೀಯ ಸ್ಥಾನ ಪಡೆದುಕೊಂಡಿದೆ. ಮುಳುಗು ತಜ್ಞ ಸಿದ್ದಲಿಂಗ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸ್ತಬ್ಧ ಚಿತ್ರಗಳೊಂದಿಗೆ ಮೆರವಣಿಗೆ ನಡೆಸಿದರು. ನಂತರ ಪೊಲೀಸ್, ಸ್ಕೌಟ್ಸ್, ಗೈಡ್ಸ್, ವಿವಿಧ ಶಾಲಾ ಮಕ್ಕಳಿಂದ ಪಥ ಸಂಚಲನ ನಡೆಯಿತು. ಕಾರ್ಯಕ್ರಮದ ನಂತರ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು.