*ಗೋಣಿಕೊಪ್ಪಲು, ಆ. 16: ಬಸ್ ಹಾಗೂ ಬೈಕ್ ನಡುವಿನ ಮುಖಾ ಮುಖಿ ಅಫಘಾತದಲ್ಲಿ ಕೇರಳ ಹಾಗೂ ಬೆಂಗಳೂರು ಮೂಲದ ಇಬ್ಬರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ.

ಹರಿಶ್ಚಂದ್ರಪುರದಲ್ಲಿ ಈ ಘಟನೆ ನಡೆದಿದ್ದು, ಕೇರಳದ ಪರಶಿನಕಡವು ನಿವಾಸಿ ಪ್ರಣವ್ ಗಣೇಶ್ ಹಾಗೂ ಬೆಂಗಳೂರು ನಿವಾಸಿ ಬಸವರಾಜ್ ಪಾಟೀಲ್ ಚಿಂತಾಜನಕ ಸ್ಥಿತಿಗೆ ತಲುಪಿದ್ದು, ಮೈಸೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.

ಪಿರಿಯಾಪಟ್ಟಣ ಮಾರ್ಗವಾಗಿ ವೀರಾಜಪೇಟೆಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಇಲ್ಲಿನ ಹರಿಶ್ಚಂದ್ರಪುರದಲ್ಲಿ ಅಳವಡಿಸಿದ್ದ ಬ್ಯಾರಿಕೇಟನ್ನು ನಿಯಂತ್ರಿಸಿ ಸಾಗುತ್ತಿದ್ದಾಗ ವೀರಾಜಪೇಟೆ ಮಾರ್ಗದಿಂದ ಮೈಸೂರಿಗೆ ತೆರಳುತ್ತಿದ್ದ ಬೈಕ್ ಸವಾರರು ಲಾರಿಯನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದ್ದಾಗ, ಬಸ್ಸಿನ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಬಸ್ಸಿನ ತಳಭಾಗದಲ್ಲಿ ಸಿಲುಕಿಕೊಂಡಿದೆ. ಬೈಕಿನಲ್ಲಿ ಸವಾರಿ ಮಾಡುತ್ತಿದ್ದ ಯುವಕರಿಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ಬೈಕನ್ನು ಬಸವರಾಜ್‍ಪಾಟಿಲ್ ಚಾಲನೆ ಮಾಡುತ್ತಿದ್ದ. ಯುವಕರು ಧರಿಸಿದ ಹೆಲ್ಮೆಟ್ ಕಳಚಿಕೊಂಡು ಬಸ್ಸಿನ ಮುಂಭಾಗÀಕ್ಕೆ ತಗುಲಿದ್ದು, ಬಸವರಾಜ್ ಪಾಟಿಲ್‍ನ ಎಡಭಾಗದ ಕಾಲಿನ ಮೂಳೆ ಮುರಿದುಹೋಗಿದೆ. ಪ್ರಣವ್ ಗಣೇಶ್‍ನ ಕೈ ಕಾಲುಗಳಿಗೂ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ. ಇಬ್ಬರನ್ನು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ, ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆರೋಗ್ಯ ಕೇಂದ್ರಕ್ಕೆ ದಾಖಲಿಸಿಲಾಗಿದೆ.

-ಚಿತ್ರ ವರದಿ-ಎನ್.ಎನ್. ದಿನೇಶ್