ಮಡಿಕೇರಿ, ಆ. 18: ಸ್ವಾತಂತ್ರ ದಿನಾಚರಣೆ ಸಂದರ್ಭ ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಕೈಯನ್ನು ಮುಟ್ಟಿದ್ದ ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಅವರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾವಾಗುತ್ತಿದ್ದಂತೆಯೇ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.ಇಂದು ಈ ಬಗ್ಗೆ ಪ್ರತಿಕ್ರಿಯಿಸಿರುವ ವೀಣಾ ಅಚ್ಚಯ್ಯ ಘಟನೆಯಿಂದ ತಾನು ತೀವ್ರ ನೊಂದಿದ್ದು, ಈ ಬಗ್ಗೆ ಪಕ್ಷದ ವರಿಷ್ಠರಿಗೆ ವಿವರಿಸಿರುವದಾಗಿ ತಿಳಿಸಿದ್ದಾರೆ. ಸಾಮಾಜಿಕ ತಾಣಗಳಲ್ಲಿ ವಿಡಿಯೋ ಹರಡುತ್ತಿದ್ದಂತೆಯೇ, ಕುಟುಂಬ, ಸ್ನೇಹಿತರು ಹಾಗೂ ಜಿಲ್ಲೆಯಲ್ಲಿ ಈ ಬಗ್ಗೆ ಅಸಮಾಧಾನದ ಮಾತುಗಳು ಕೇಳಿ ಬಂದಿದ್ದು, ರಮೇಶ್ ಅವರ ವರ್ತನೆಯನ್ನು ತಾನು ಖಂಡಿಸುವದಾಗಿ ಹೇಳಿಕೆ ನೀಡಿದ್ದಾರೆ.

ಈ ಕುರಿತು ತಾ. 19 ರಂದು (ಇಂದು) ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಚರ್ಚಿಸಿ ಮುಂದಿನ ಹೆಜ್ಜೆ ಇಡುವದಾಗಿ ಪ್ರತಿಕ್ರಿಯಿಸಿದ್ದಾರೆ.

ರಮೇಶ್ ಹೇಳಿಕೆ : ಘಟಣೆ ಬಗ್ಗೆ ಪ್ರತಿಕ್ರಿಯಿಸಿರುವ ಟಿ.ಪಿ. ರಮೇಶ್ ಅವರು ತಾವು

(ಮೊದಲ ಪುಟದಿಂದ) ಇತ್ತೀಚೆಗೆ ಪ್ರಕೃತಿ ಚಿಕಿತ್ಸೆ ಪಡೆದುಕೊಂಡು ಬಂದು ಆ ಬಗ್ಗೆ ವೀಣಾ ಅವರಲ್ಲಿ ಪ್ರಸ್ತಾಪಿಸುತ್ತಿದ್ದ ಸಂದರ್ಭ ಕೈ ಸವರಿರುವದಾಗಿಯೂ ಅದರಲ್ಲಿ ಯಾವದೇ ಕೆಟ್ಟ ಚಿಂತನೆ ಇರಲಿಲ್ಲವೆಂದೂ ಸ್ಪಷ್ಟನೆ ನೀಡಿದ್ದಾರೆ. ವೀಣಾ ಅವರನ್ನು ಸಹೋದರಿ ಭಾವದಲ್ಲಿ ತಾನು ಕಂಡಿದ್ದು, ಆಕೆಗೆ ಮುಜುಗರವಾಗಿದ್ದಲ್ಲಿ ಕ್ಷಮೆ ಕೋರುವದಾಗಿ ಹೇಳಿದ್ದಾರೆ.