ಸಿದ್ದಾಪುರ, ಆ. 20: ಗುಹ್ಯ ಗ್ರಾಮಕ್ಕೆ ತೆರಳುವ ಕೂಡುಗದ್ದೆ ರಸ್ತೆಯ ಗುಂಡಿಗಳನ್ನು ಮುಚ್ಚುವದರೊಂದಿಗೆ ಸಿದ್ದಾಪುರದ ಯುವ ಶಕ್ತಿ ವೇದಿಕೆಯನ್ನು ವಿಭಿನ್ನವಾಗಿ ಉದ್ಘಾಟಿಸಲಾಯಿತು.

ಸಿದ್ದಾಪುರದ ಕೆಲ ಯುವಕರು ಸೇರಿಕೊಂಡು ನೂತನವಾಗಿ ಯುವ ಶಕ್ತಿ ವೇದಿಕೆ ರಚಿಸಿದ್ದು, ಸಮಾಜ ಸೇವೆಯ ಮೂಲಕ ಸಮಿತಿಯನ್ನು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಕೂಡುಗದ್ದೆ ರಸ್ತೆಯನ್ನು ಸರಿಪಡಿಸುವದರೊಂದಿಗೆ ಸಮಿತಿಯನ್ನು ಉದ್ಘಾಟಿಸಿದೆ. ಕೂಡುಗದ್ದೆಯ ರಸ್ತೆಯು ಗುಂಡಿ ಬಿದ್ದಿದ್ದು, ಬಾಡಿಗೆ ವಾಹನ ಸೇರಿದಂತೆ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಯುವ ಶಕ್ತಿ ವೇದಿಕೆಯ ತಂಡ ತಮ್ಮದೇ ಖರ್ಚಿನಲ್ಲಿ ಹದಗೆಟ್ಟಿರುವ ರಸ್ತೆಯ ಗುಂಡಿಗಳನ್ನು ಇಟ್ಟಿಗೆ ಸೇರಿದಂತೆ ಕಲ್ಲುಗಳನ್ನು ಹಾಕಿ ದುರಸ್ತಿಪಡಿಸಿದೆ.

ಈ ಸಂದರ್ಭ ಯುವ ಶಕ್ತಿ ವೇದಿಕೆಯ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ, ಪ್ರಧಾನ ಕಾರ್ಯದರ್ಶಿ ಎ.ಎಸ್.ಮುಸ್ತಫ, ಸಂಘಟನಾ ಕಾರ್ಯದರ್ಶಿ ಸತೀಶ್ ನಾರಾಯಣ್, ಸಹ ಕಾರ್ಯದರ್ಶಿ ಕೆ.ಎಸ್ ಸುನಿಲ್ ಸೇರಿದಂತೆ ಇನ್ನಿತರರು ಇದ್ದರು. ಗ್ರಾಮಸ್ಥರು ಕೂಡ ಯುವ ಶಕ್ತಿ ವೇದಿಕೆಯೊಂದಿಗೆ ಕೈಜೋಡಿಸಿ ರಸ್ತೆ ದುರಸ್ಥಿ ಕೆಲಸದಲ್ಲಿ ಪಾಲ್ಗೊಂಡರು.

ಗ್ರಾಮಸ್ಥರ ಶ್ಲಾಘನೆ

ಹಲವು ತಿಂಗಳುಗಳಿಂದ ಹದಗೆಟ್ಟಿದ್ದ ಕೂಡುಗದ್ದೆ ರಸ್ತೆಯ ಗುಂಡಿಗಳನ್ನು ಮುಚ್ಚಿ ರಸ್ತೆಯನ್ನು ದುರಸ್ಥಿಪಡಿಸಿದ ಯುವ ಶಕ್ತಿ ವೇದಿಕೆಯ ಕಾರ್ಯವನ್ನು ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.