ಕೂಡಿಗೆ, ಆ. 24: ಜಿಲ್ಲೆಯ ಪ್ರಮುಖ ಹಾರಂಗಿ ಅಣೆಕಟ್ಟೆಯಿಂದ ಕೊಡಗಿನ ಗಡಿಭಾಗ ಸೇರಿದಂತೆ ಮೈಸೂರು ಮತ್ತು ಹಾಸನ ಜಿಲ್ಲೆಗಳ ಸಾವಿರಾರು ಹೆಕ್ಟೇರ್ ಪ್ರದೇಶಗಳಿಗೆ ನೀರು ಹರಿಸುವ ಯೋಜನೆಯಡಿಯಲ್ಲಿ ನಿರ್ಮಾಣಗೊಂಡಿರುವ ಹಾರಂಗಿ ಮುಖ್ಯ ನಾಲೆಯು, ಅಣೆಕಟ್ಟೆಯ ಒಂದು ಕಿ.ಮೀ.ಅಂತರದಲ್ಲಿರುವ ಮಾವಿನ ಹಳ್ಳದ ಸಮೀಪದ ತಿರುವಿನಲ್ಲಿ ಈಗಾಗಲೇ ಬಿರುಕುಗೊಂಡಿದೆ. ನಾಲೆಗೆ 1200 ಕ್ಯೂಸೆಕ್ಸ್ ನೀರು ಹರಿಬಿಡಲಾಗಿದ್ದು, ನೀರಿನ ಒತ್ತಡಕ್ಕೆ ಒಡೆಯುವ ಹಂತ ತಲುಪಿದೆ. ಮುಖ್ಯ ನಾಲೆಯ ನಿರ್ಮಾಣದ ಸಂದರ್ಭ ಅಂದರೆ ಹಾರಂಗಿ ಅಣೆಕಟ್ಟೆಯ ನಿರ್ಮಾಣದ ಸಂದರ್ಭ ಕಡಿಮೆ ಅಚ್ಚುಕಟ್ಟು ವ್ಯಾಪ್ತಿಯನ್ನು ಗುರುತಿಸಲಾಗಿತ್ತು. ಮುಖ್ಯ ನಾಲೆಯ ಮೂಲಕ ಕಣಿವೆಯ ವರೆಗೆ ಹರಿಯುವ ನೀರು ತದನಂತರ ಎಡದಂಡೆ ಮತ್ತು ಬಲದಂಡೆ ನಾಲೆಗಳಾಗಿ ಮಾರ್ಪಟ್ಟಿದೆ. ನಾಲೆಯ ನಿರ್ಮಾಣದ ಸಂದರ್ಭ ಹಾರಂಗಿ ಅಣೆಕಟ್ಟೆಯ ಸಮೀಪದ ಮಾವಿನ ಹಳ್ಳದ ತಗ್ಗು ಪ್ರದೇಶದಲ್ಲಿ ನೀರು ಹರಿಯಲು ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಅಚ್ಚುಕಟ್ಟು ಪ್ರದೇಶಗಳು ಹೆಚ್ಚಾದಂತೆ ಅಣೆಕಟ್ಟೆಯಿಂದ ಮುಖ್ಯನಾಲೆಯಲ್ಲಿ ಹೆಚ್ಚು ನೀರು ಹರಿಸಲಾಗುತ್ತಿದೆ. ನಾಲೆಯ ಸೇತುವೆಯು ಕಿರಿದಾಗಿದ್ದು, ನೀರಿನ ಒತ್ತಡದಿಂದ ಹಿಂಬದಿಯ ಸೆಳೆತ ಹಾಗೂ ತಿರುವಿನ ಸ್ಥಳವಾಗಿರುವದರಿಂದ ಬಿರುಕು ಬಿಟ್ಟಿದ್ದು, ನೀರು ಸೋರಿಕೆಯಾಗುತ್ತಿದೆ.

ಕಳೆದ ವರ್ಷ ಈ ಸ್ಥಳಕ್ಕೆ ಅಣೆಕಟ್ಟೆಯ ಅನುದಾನದಲ್ಲಿ ನಾಲೆಯ ತಳದ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಆದರೆ, ಇಕ್ಕೆಲಗಳ ಕಾಮಗಾರಿಯನ್ನು ಮಾಡದೆ ಇರುವದರಿಂದ ನೀರಿನ ಸೋರಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು, ಮರಳು ತುಂಬಿದ ಮೂಟೆಗಳನ್ನು ನೀರು ಸೋರುವಿಕೆಯ ಜಾಗಕ್ಕೆ ಹಾಕಲಾಗಿದೆ. ಕಳೆದ ಒಂದು ವಾರಗಳಿಂದ ನಾಲೆಯಲ್ಲಿ ಹುಣಸೂರು ಮತ್ತು ಅರಕಲಗೂಡು ತಾಲ್ಲೂಕುಗಳ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಉದ್ದೇಶದಿಂದ ನಾಲೆಗಳಿಗೆ ಹೆಚ್ಚು ನೀರು ಹರಿಸುತ್ತಿರುವದು ಕಂಡುಬರುತ್ತಿದೆ.

ಈ ಜಾಗದಲ್ಲಿ ಇದೀಗ ಬಿರುಕುಗೊಳ್ಳುವದರ ಜೊತೆಗೆ ನೀರಿನ ಸೆಳೆತವು ಹಳ್ಳಕ್ಕೆ ಹೆಚ್ಚಾಗಿ ಹರಿಯುತ್ತಿದೆ. ಕೆಳಭಾಗದಲ್ಲಿ ಅನೇಕ ರೈತರುಗಳು ವ್ಯವಸಾಯ ಮಾಡುತ್ತಿರುತ್ತಾರೆ. ನೀರು ಹೆಚ್ಚಾಗಿ ಜಮೀನಿನ ಮಣ್ಣನ್ನು ಹೊತ್ತೊಯ್ಯುತ್ತಿದೆ. 1994ರಲ್ಲಿ ನಾಲೆಯು ಒಡೆದುಹೋಗಿ ನೂರಾರು ಎಕರೆಯಲ್ಲಿ ಬೆಳೆದ ಬೆಳೆ ನಷ್ಟವಾಗಿ ಸಮೀಪದಲ್ಲಿದ್ದ ರೈತರ ಮನೆಗಳಿಗೂ ಸಹ ಅಪಾಯ ಎದುರಾಗಿತ್ತು. ಬೆಳೆ ನಷ್ಟವಾಗಿ ಅಂದಿನ ಸರ್ಕಾರ ಪರಿಹಾರವನ್ನು ಒದಗಿಸಿತ್ತು. ಮುಖ್ಯನಾಲೆಯ ಬಲಭಾಗದ ಗೋಡೆ ಸಮರ್ಪಕವಾಗಿ ಕಾಮಗಾರಿ ನಿರ್ವಹಿಸದೆ ಇರುವದರಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚು ನೀರು ಹಳ್ಳಕ್ಕೆ ಹರಿಯುತ್ತಿದೆ. ಶೀಘ್ರವಾಗಿ ನಾಲೆಯನ್ನು ಸರಿಪಡಿಸಿ, ಮುಂದೊಂದು ದಿನ ನಡೆಯಬಹುದಾದ ಭಾರಿ ಅನಾಹುತವನ್ನು ತಡೆಯಬೇಕಾಗಿ ಹಾರಂಗಿ ನೀರಾವರಿ ಮಹಾಮಂಡಲದ ನಿರ್ದೇಶಕ ಐ.ಎಸ್.ಗಣೇಶ್, ನೀರು ಬಳಕೆದಾರರ ಸಂಘದ ನಿರ್ದೇಶಕ ಮಂಜುನಾಥ್, ನಾಗರಾಜ್, ಕೃಷ್ಣ, ಈ ವ್ಯಾಪ್ತಿಯ ರೈತರುಗಳಾದ ಅಚ್ಚಯ್ಯ, ಮಾದಪ್ಪ, ಜಾನಮ್ಮ ಆಗ್ರಹಿಸಿದ್ದಾರೆ.

ಕಾರ್ಯಪಾಲಕ ಅಭಿಯಂತರ ಧರ್ಮರಾಜ್ ಈ ವಿಷಯಕ್ಕೆ ಸಂಬಂಧಪಟ್ಟಂತೆ ಸುದ್ದಿಗಾರರೊಂದಿಗೆ ಮಾತನಾಡಿ, ಈ ಸಾಲಿನಲ್ಲಿ ನಾಲೆಗಳ ಕಾಮಗಾರಿಗೆ ಹೆಚ್ಚು ಹಣವನ್ನು ಮಂಜೂರು ಮಾಡಿಸುವದರ ಬಗ್ಗೆ ಕ್ರಮಕೈಗೊಳ್ಳಲಾಗಿದೆ. ಅಲ್ಲದೆ, ಕಳೆದ ಸಾಲಿನಲ್ಲಿ ಅಣೆಕಟ್ಟೆಯ ದುರಸ್ತಿಗೆ ಬಂದ ಹಣವನ್ನು ಮುಖ್ಯ ಕಾರ್ಯವಾದುದರಿಂದ ನಾಲೆಯ ತಳಮಟ್ಟಕ್ಕೆ ಹಣವನ್ನು ವಿನಿಯೋಗಿಸಿ ಕಾಮಗಾರಿ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ದುರಸ್ತಿಗೆ ಕ್ರಮಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ.

ಕೆ.ಕೆ. ನಾಗರಾಜ ಶೆಟ್ಟಿ