ಮಡಿಕೇರಿ, ಆ. 26: ಇಂದು ತಾ. 27ರಂದು (ಇಂದು) ಸಂಜೆ 6.30 ಗಂಟೆಗೆ ನಗರದ ಓಂಕಾರ ಯುವ ವೇದಿಕೆಯ ಆಶ್ರಯದಲ್ಲಿ ಓಂಕಾರ ಸದನದಲ್ಲಿ ಬಳ್ಳಾರಿ ಎಂ. ರಾಘವೇಂದ್ರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ವಿದ್ವಾನ್ ಬಳ್ಳಾರಿ ಎಂ. ರಾಘವೇಂದ್ರ ಬಳ್ಳಾರಿಯವರು ಅನೇಕ ಪೀಳಿಗೆಗಳಿಂದ ಅವರ ಪೂರ್ವಜರು ಕರ್ನಾಟಕ ಸಂಗೀತವನ್ನು ರೂಢಿಸಿಕೊಂಡು ಬಂದಿದ್ದಾರೆ.

ರಾಘವೇಂದ್ರ ಅವರು ಗಾಯಕ ರಾಗಿರುವದಲ್ಲದೆ ಕೊಣ್ಣಕೋಲ್ ಮತ್ತು ಮೋರ್ಚಿಂಗ್‍ನಲ್ಲೂ ಪರಿಣತಿಯನ್ನು ಹೊಂದಿದ್ದಾರೆ. ಬಳ್ಳಾರಿ ಎಂ. ರಾಘವೇಂದ್ರ ಅವರು ಹಿಂದುಸ್ತಾನಿ ಶೈಲಿಯ ಸಂಗೀತವನ್ನು ಕಲಿತಿದ್ದು, ಅನೇಕ ಹಿಂದುಸ್ತಾನಿ ಗಾಯಕ ರೊಂದಿಗೆ ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟಿದ್ದಾರೆ. ಅವರು ಸಂಗೀತವನ್ನು ಕುರಿತಂತೆ ಅನೇಕ ವಿಷಯ ಗೋಷ್ಠಿಗಳನ್ನು ಹಾಗೂ ಪ್ರಯೋಗಗಳನ್ನು ನಡೆಸಿಕೊಟ್ಟಿದ್ದಾರೆ. ಯುರೋಪ್ ಹಾಗೂ ಕೆನಡಾಗಳಲ್ಲಿ ಟಿ.ಎ.ಎಸ್. ಮಣಿ ಅವರ ಸಮೂಹದೊಂದಿಗೆ ಸಂಗೀತ ಕಾರ್ಯಕ್ರಮಗಳಿಗಾಗಿ ಪ್ರವಾಸ ಮಾಡಿದ್ದಾರೆ. ಮಡಿಕೇರಿಯ ಆಕಾಶವಾಣಿಯ ನಿಲಯ ನಿರ್ದೇಶಕರಾಗಿ ಕೆಲಸ ಮಾಡಿದ್ದರು.